ಕ್ರೀಡೆಯೂ ಸಮಾಜವನ್ನು ಒಗ್ಗೂಡಿಸುವ ಒಂದು ಸಕಾರಾತ್ಮಕ ಅಸ್ತ್ರವಾಗಿದೆ. ಅದನ್ನು ಸಮಾಜ ಕಟ್ಟುವುದಕ್ಕಾಗಿ ಬಳಸಿಕೊಳ್ಳಬೇಕು ಎಂದು ಮಧುಗಿರಿ ತಾಲೂಕು ಚಿಕ್ಕದಾಳವಟ್ಟ ಗ್ರಾಮ ಪಂಚಾಯಿಸಿ ಸದಸ್ಯ ಹಾಗೂ ಯುವ ಮುಖಂಡ ನಂಜಪ್ಪ ತಿಳಿಸಿದರು.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟ್ ತಂಡದ ವತಿಯಿಂದ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉದ್ದೇಶಿಸಿ ಮಾತನಾಡಿ, ಕ್ರಿಕೆಟ್ ಅಂತರಾಷ್ಟ್ರೀಯ ಮಟ್ಟದಿಂದ ಹಳ್ಳಿಯವರೆಗೂ ಕೋಟ್ಯಂತರ ಜನರನ್ನು ಆಕರ್ಷಿಸಿರುವ ಕ್ರೀಡೆ. ಇಷ್ಟು ಕೋಟಿ ಜನರನ್ನು ಆಕರ್ಷಿಸಿದ ಕ್ರೀಡೆಗೂ ಸಹ ವ್ಯವಹಾರಿಕ ದೃಷ್ಟಿಯೇ ಮುಖ್ಯವಾಗಿ ಹೋಗಿರುವುದು ದುರಂತವಾಗಿದೆ ಎಂದರು.
ನಮ್ಮ ಹಳ್ಳಿಗಳಲ್ಲಿ ನಡೆಯುವ ಈ ಟೂರ್ನಿಗಳು ಯಾವುದೇ ಜಗಳ, ಧ್ವೇಷಕ್ಕೆ ಆಸ್ಪದ ನೀಡದೇ ಕೇವಲ ಕ್ರೀಡಾ ಸ್ಪೂರ್ತಿ ಮತ್ತು ಯುವಜನರನ್ನು ಒಟ್ಟುಗೂಡಿಸುವ ಕೆಲಸಕ್ಕೆ ಮಾತ್ರ ಬಳಸಬೇಕು. ಶಿವಕುಮಾರ ಸ್ವಾಮಿಗಳು ಹಾಗೂ ಪುನೀತ್ ರಾಜ್ಕುಮಾರ್ ಅವರ ಅಜರಾಮರ. ಅಂತಹ ವ್ಯಕ್ತಿತ್ವಗಳ ಹೆಸರಿನಲ್ಲಿ ನೀವು ಸ್ಪರ್ಧೆಗಳನ್ನು ನಡೆಸುವಾಗ ಇನ್ನಷ್ಟು ಜವಾಬ್ದಾರಿಯಿಂದ ಇರಬೇಕಾಗುತ್ತದೆ. ಸತತ ಹತ್ತನೇ ವರ್ಷವೂ ಈ ರೀತಿಯ ಪ್ರಯತ್ನ ಮಾಡುತ್ತಿರುವ ನಿಮ್ಮ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಮುಖಂಡ ಗೋವಿಂದಪ್ಪ ಕೇವಲ ಆಟಕ್ಕಾಗಿ ಆಟ ಆಡುವುದಲ್ಲ, ಆಟದಿಂದಲೂ ಸಾಮಾಜಿಕ ಸಂದೇಶ ನೀಡಬೇಕಿದೆ. ಜಾತಿ ಧರ್ಮ ಮೀರಿ ಒಟ್ಟಿಗೆ ಒಟ್ಟುಗೂಡಿ ಆಟವಾಡುವುದು ಒಂದು ದೊಡ್ಡ ಸಂದೇಶ ಎಂಬುದನ್ನು ಮರೆಯಬಾರದು. ನಮ್ಮೂರ ಶಾಲೆಯನ್ನು ಉಳಿಸಲು ಸಹ ಇದೇ ರೀತಿಯ ಕ್ರೀಡಾಸ್ಪೂರ್ತಿಯನ್ನು ಇಟ್ಟುಕೊಂಡು ಮುನ್ನಡೆಯಬೇಕು ಎಂದರು.
ಮುಖಂಡರಾದ ಉಗ್ರೇಗೌಡ, ನಾಗಭೂಷಣ, ಶಂಕರರೆಡ್ಡಿ, ಸೋಮಶೇಖರ್ ರೆಡ್ಡಿ, ಭಕ್ತರ್, ಸತೀಶ್, ಮಾರುತಿ, ಸಂಜೀವ್, ನವೀನ್, ರಾಜೇಶ್ ,ಜೀವನ್ ,ಉದಯಕಿರಣ್ ಇದ್ದರು.


