Sunday, April 26, 2026
Google search engine
Homeಮುಖಪುಟಹುಸಿ ಭರವಸೆಗಳನ್ನು ಬಿತ್ತುತ್ತಿರುವ ಪ್ರಭುತ್ವಗಳು-ಸಾಹಿತಿ ಎಚ್.ಗೋವಿಂದಯ್ಯ ಆತಂಕ

ಹುಸಿ ಭರವಸೆಗಳನ್ನು ಬಿತ್ತುತ್ತಿರುವ ಪ್ರಭುತ್ವಗಳು-ಸಾಹಿತಿ ಎಚ್.ಗೋವಿಂದಯ್ಯ ಆತಂಕ

ಹೊಸ ಬರಹಗಾರರಿಗೆ ಅವಕಾಶಗಳನ್ನು ನೀಡಿ ಅವರ ಸಾಹಿತ್ಯಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದಲ್ಲದೆ, ಪ್ರಶ್ನಿಸುವ ಗುಣವನ್ನು ರೂಪಿಸಬೇಕಾಗಿದೆ ಎಂದು ಸಾಹಿತಿ ಎಚ್.ಗೊವಿಂದಯ್ಯ ದ್ವಾರನಕುಂಟೆ ತಿಳಿಸಿದರು.

ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿ ಮಾತನಾಡಿದರು.

ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಬದುಕಿನ ಮೌಲ್ಯಗಳನ್ನು ಕಾವ್ಯದ ಮೂಲಕ ಉಳಿಸಿ ಬೆಳೆಸಬೇಕು. ಬರಹಗಾರರಿಗೆ ಪರಂಪರೆಯ ಅರಿವಿನ ಜೊತೆಗೆ ಹೊಸ ಕಾಲದ ಬೇಕು, ಬೇಡಗಳ ಬಗೆಗಿನ ಎಚ್ಚರವೂ ಇರಬೇಕು ಎಂದು ಹೇಳಿದರು.

ಸೌಂದರ್ಯೋಪಾಸನೆಯನ್ನು ವರ್ಣಿಸುವುದಷ್ಟೇ ಕಾವ್ಯವಾಗಲಾರದು, ಇತಿಯೋಪಿಯ, ಕೀನ್ಯಾ, ನೇಪಾಳದಂತಹ ಬಡ ರಾಷ್ಟ್ರಗಳ ದಾರುಣತೆಯೂ ಕಾವ್ಯವಾಗಬಲ್ಲದು ಎಂದರು.

ಕವಿಗೋಷ್ಠಿಯೆನ್ನುವುದು ಪದ್ಯಗಳನ್ನು ಓದುವ ವೇದಿಕೆಯಷ್ಟೇ ಅಲ್ಲ, ಸಂವಾದ ಮತ್ತು ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ಸೃಜನಾತ್ಮಕ ವೇದಿಕೆಯಾಗಬಲ್ಲದು ಎಂದು ಹೇಳಿದರು.

ಮೇಷ್ಟ್ರು ಬರಗೂರು ರಾಮಚಂದ್ರಪ್ಪ ಅವರು ಹೇಳುವಂತೆ ‘ಗಂಗಾ ನದಿಯಷ್ಟೇ ಪವಿತ್ರವಾದುದಲ್ಲ. ನಮ್ಮೂರಿನ ಹಳ್ಳ, ಕೆರೆಯೂ ಪವಿತ್ರವೆ. ಶ್ರೀಗಂಧವಷ್ಟೇ ಶ್ರೇಷ್ಟವಲ್ಲ, ನಮ್ಮೂರಿನ ಜಾಲಿ ಮರವೂ ಶ್ರೇಷ್ಟ. ಕೋಗಿಲೆಯಷ್ಠೇ ಶ್ರೇಷ್ಟವಲ್ಲ, ಕಾರುಣ್ಯಕ್ಕೆ ಹೆಸರಾದ ಕಾಗೆಯೂ ಕೂಡ ಶ್ರೇಷ್ಟ ಎಂಬಂತೆ, ಇಲ್ಲಿ ಯಾರೂ ಶ್ರೇಷ್ಟವಲ್ಲ, ಯಾರೂ ಕನಿಷ್ಠವಲ್ಲ. ಎಲ್ಲರೂ ಸಮಾನರೇ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇಂದು ನಮ್ಮ ಮುಂದೆ ಅನೇಕ ಸವಾಲುಗಳು ಇವೆ. ಬಡತನ, ದಾರಿದ್ರ್ಯ, ವರ್ಣವ್ಯವಸ್ಥೆ, ಮರ್ಯಾದೆಗೇಡು ಹತ್ಯೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ರೈತರ ಸಮಸ್ಯೆಗಳು, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ಹಾಗೆ ಜಗತ್ತನ್ನು ಕಾಡುತ್ತಿರುವ ಯುದ್ದದ ಭೀತಿ ಹೀಗೆ ಅನೇಕ ಆತಂಕ ಹಾಗೂ ವೈರುಧ್ಯಗಳ ನಡುವೆ ಬದುಕು ನಡೆಸುತ್ತಿದ್ದೇವೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ ಸೌಹಾರ್ದ ಭಾರತವನ್ನು, ಸಮ ಸಮಾಜವನ್ನು ಕಟ್ಟಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಪ್ರಭುತ್ವಗಳು ಇಂದು ಜನರಲ್ಲಿ ಹುಸಿ ಭರವಸೆಗಗಳನ್ನು ಬಿತ್ತುತ್ತ ಭ್ರಮೆಯಲ್ಲಿಟ್ಟಿವೆ. ಹುಸಿ ಮೌಲ್ಯಗಳು ಮತ್ತು ಅಪವ್ಯಾಖ್ಯಾನಗಳ ಈ ಕಾಲಘಟ್ಟದಲ್ಲಿ ನಾವಿದ್ದೇವೆ. ಚರಿತ್ರೆ ಮತ್ತು ಪುರಾಣಗಳನ್ನು ಸಮಕಾಲೀನ ಸನ್ನಿವೇಶಕ್ಕೆ ಮುಖಾಮುಖಿಯಾಗಿಟ್ಟು ನೋಡುವ ಸಾಂಸ್ಕೃತಿಕ ಎಚ್ಚರವಿರಬೇಕೆಂದರು.

ಬೌದ್ಧಿಕ ವಿಕಾಸ ಮತ್ತು ಸಾಂಸ್ಕೃತಿಕ ಎಚ್ಚರದ ಪರಿಣಾಮವಾಗಿ ಜನಪದರಿಂದ ಹಿಡಿದು ಇಂದಿನ ಹೊಸ ಕಾಲದವರೆಗಿನ ಅನೇಕ ಕವಿಗಳು ಬರಹಗಾರರು ವಿಲಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಾಹಿತಿ ಎಲ್.ಹನುಮಂತಯ್ಯ, ಕವಿ ಸತ್ಯಮಂಗಲ ಮಹದೇವ್, ಲೇಖಕಿ ಶೈಲ ನಾಗರಾಜ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular