ಕನ್ನಡ ನೆಲದಲ್ಲಿ ಬಸವಾದಿ ಶರಣರಿಂದ ಆರಂಭವಾದ ಸಾಮಾಜಿಕ ನ್ಯಾಯದ ಚಳವಳಿಯನ್ನು ಬಳಿಕ ಸರ್ವಜ್ಞ, ಸೂಫಿ ಸಂತರು, ನಾರಾಯಣ ಗುರು, ಕನಕದಾಸರು ಸೇರಿದಂತೆ ಹಲವಾರು ಸಮಾಜ ಸುಧಾರಕರು ಮುಂದುವರಿಸಿಕೊಂಡು ಬಂದಿದ್ದಾರೆ. ಬಾಬಾ ಸಾಹೇಬರು ಈ ಆಶಯಗಳಿಗೆ ಸಾಂವಿಧಾನಿಕ ರಕ್ಷಣೆ ನೀಡಿ, ಕಾನೂನಿನ ಬಲ ತುಂಬಿದ್ದಾರೆ. ಆದರೂ ಇಂದಿಗೂ ಅಸಮಾನತೆ, ಶೋಷಣೆಗಳು ಜೀವಂತವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಾತಿ, ಧರ್ಮ, ಲಿಂಗ, ಭಾಷೆ, ಬಣ್ಣ ಈ ಯಾವುದರ ಮೇಲೂ ತಾರತಮ್ಯ ಮಾಡದೆ, ಪ್ರತಿ ವ್ಯಕ್ತಿಗೂ ಸಮಾನ ಅವಕಾಶ, ಹಕ್ಕುಗಳನ್ನು ನೀಡುವುದೇ ಸಾಮಾಜಿಕ ನ್ಯಾಯ. ಇದಕ್ಕಾಗಿಯೇ ನನ್ನ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ಮುಡಿಪಿಟ್ಟಿದ್ದೇನೆ, ನನ್ನ ಕೊನೆಯ ಉಸಿರಿರುವವರೆಗೂ ಅವಕಾಶ ವಂಚಿತ ಜನರ ಪರವಾಗಿಯೇ ನಿಲ್ಲುತ್ತೇನೆ ಎಂದು ತಿಳಿಸಿದ್ದಾರೆ.
ವಿಶ್ವ ಸಾಮಾಜಿಕ ನ್ಯಾಯದ ದಿನವಾದ ಶುಕ್ರವಾರ ಸಾಮಾಜಿಕ ನ್ಯಾಯದ ಬಂಡಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಸಂಕಲ್ಪಗೈಯ್ಯೋಣ. ಸಮಸಮಾಜಕ್ಕಾಗಿ ಜೊತೆಗೂಡಿ ಶ್ರಮಿಸೋಣ ಎಂದು ಮುಖಪುಟದಲ್ಲಿ ಬರೆದುಕೊಂಡಿದ್ದಾರೆ.
“ಸಾಮಾಜಿಕ ನ್ಯಾಯವೆಂದರೆ ನಾನು ಆರಿಸಿಕೊಂಡ ಬದುಕಿನ ಹಾದಿ”
ಸಾಮಾಜಿಕ ನ್ಯಾಯ ಎನ್ನುವುದು ನನ್ನ ಪಾಲಿಗೆ ಒಂದು ಸಿದ್ಧಾಂತ ಅಲ್ಲ, ಅದು ಸರ್ವ ಸಮಾನತೆಯ ಗುರಿಯನ್ನು ತಲುಪಲು ನಾನು ಆರಿಸಿಕೊಂಡ ಬದುಕಿನ ಹಾದಿ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಸಾಮಾಜಿಕ ನ್ಯಾಯ ಎಂದರೆ ಯಾರಿಂದಲೋ ಕಿತ್ತು, ಇನ್ನಾರಿಗೋ ಹಂಚುವ ಜನವಿರೋಧಿಯಾದ, ತಾರತಮ್ಯದ ನೀತಿ ಎಂಬಂತೆ ಬಿಂಬಿಸಲಾಗುತ್ತಿದೆ. ಸಂಪತ್ತು, ಅಧಿಕಾರ ಮತ್ತು ಅವಕಾಶಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಅಭಿವೃದ್ದಿಯ ಫಲವನ್ನು ಜಾತಿ, ಧರ್ಮ, ಪ್ರದೇಶಗಳ ಭೇದವಿಲ್ಲದೆ ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕೆನ್ನುವುದು ಸಂವಿಧಾನದ ಆಶಯವಾಗಿ ಹೊರಹೊಮ್ಮಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎಂದಿದ್ದಾರೆ.
ಇದೇ ನಿಜವಾದ ವೈಜ್ಞಾನಿಕವಾದ ಅಭಿವೃದ್ಧಿ ಮಾದರಿ. ಜಾತಿ, ಲಿಂಗ, ವರ್ಗ, ಪ್ರದೇಶಗಳ ತಾರತಮ್ಯ ನಿವಾರಣೆಗಳ ಜೊತೆಯಲ್ಲಿ ನಗರ ಮತ್ತು ಹಳ್ಳಿಗಳ ನಡುವಿನ ಅಂತರವನ್ನು ನಿವಾರಿಸುವುದು ಕೂಡಾ ಸಾಮಾಜಿಕ ನ್ಯಾಯವೇ ಆಗಿದೆ ಎಂದು ತಿಳಿಸಿದ್ದಾರೆ.


