ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ ಹೊಸದಾಗಿ ಮದುವೆಯಾಗಿ ದೇವಸ್ಥಾನಕ್ಕೆ ಬಂದ ದಲಿತ ದಂಪತಿಯನ್ನು ಹೊರಗೆ ಕಳಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ ಫೆ.20ರಂದು ನಡೆದಿರುವ ವಿಡಿಯೋ ವೈರಲ್ ಆಗಿದೆ.
ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಜಿಲ್ಲೆಯಲ್ಲೇ ಇಂತಹ ಹೇಯ ಘಟನೆ ನಡೆದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ತುರುವೇಕೆರೆ ತಾಲೂಕು ಗೋಣಿತುಮಕೂರಿನ ಅರಸಮ್ಮ ದೇವಾಲಯಕ್ಕೆ ದಲಿತರಾದ ನವದಂಪತಿ ಶುಕ್ರವಾರ ಬಂದಿದ್ದಾರೆ. ಇದನ್ನು ಗಮನಿಸಿದ ಮೇಲ್ ಜಾತಿಯ ವ್ಯಕ್ತಿ ನಾರಾಯಣಪ್ಪ ನೂತನ ದಂಪತಿಯನ್ನು ನೇರವಾಗಿ ಕಳಿಸಿದರೆ ಸಮಸ್ಯೆಯಾಗುತ್ತದೆ ಎಂದು ತಿಳಿದು ಮೈಮೇಲೆ ದೇವರು ಬಂದಂತೆ ನಾಟಕವಾಡಿದ್ದಾರೆ.

ದೇವರು ಮೈದುಂಬಿಕೊಂಡ ನಾರಾಯಣಪ್ಪ ‘ನೀವು ದಲಿತರು, ದಲಿತರಿಗೆ ದೇವಾಲಯದ ಒಳಗೆ ಪ್ರವೇಶವಿಲ್ಲ, ನಡಿ ಆಚಗೆ ಎಂದು ದಬ್ಬಾಳಿಕೆಯಿಂದ ದಲಿತ ನವದಂಪತಿ ಮತ್ತು ಅವರ ಕುಟುಂಬವನ್ನು ಹೊರಗೆ ಕಳಿಸಿ, ನಿಮ್ಮ ಪ್ರವೇಶದಿಂದ ಪುಣ್ಯ ಮಾಡಿಸಬೇಕು ಎಂದು ಅಸ್ಪೃಶ್ಯತೆ ಆಚರಣೆ ಮಾಡಿರುವ ವಿಡಿಯೋ ಎಲ್ಲರ ಮೊಬೈಲ್ ನಲ್ಲಿ ಹರಿದಾಡುತ್ತಿದೆ.
ಗ್ರಾಮಸ್ಥರ ನಡವಳಿಕೆಯಿಂದ ಬೇಸತ್ತ ಜಗದೀಶ್ ದಂಪತಿ ತುರುವೇಕೆರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಾರಾಯಣಪ್ಪ, ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ, ಪದ್ಮ ಮತ್ತು ಇತರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ದೇವರು ಮೈ ಮೇಲೆ ಬಂದಂತೆ ನಾಟಕವಾಡಿದ್ದ ನಾರಾಯಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


