ಕೋಮುಸೌಹಾರ್ದತೆ ಕದಡುವ ಮತ್ತು ಧರ್ಮಗಳ ಬಗ್ಗೆ ದ್ವೇಷಭಾವನೆ ಹರಡುವ ಸುದ್ದಿಗಳಿಂದಾಗಿ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ತಬ್ಲಿಗಿ ಜಮಾತ್ ಸಭೆಯಿಂದ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿತು ಎಂದು ವದಂತಿ ವರದಿಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ “ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಪೋರ್ಟಲ್ ಗಳಲ್ಲಿ ಸುಳ್ಳು ಸುದ್ದಿಗಳು ಹರಡುತ್ತಿರುವುದರಿಂದ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು” ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
“ಪ್ರತಿಯೊಂದು ಸುದ್ದಿಯನ್ನೂ ಧರ್ಮದ ಆಯಾಮದಲ್ಲಿ ನೋಡುವ ಪ್ರವೃತ್ತಿ ಮಾಧ್ಯಮಗಳಲ್ಲಿ ಕಂಡು ಬರುತ್ತಿದೆ. ಕೋಮು ಬಣ್ಣ ನೀಡುತ್ತಿದ್ದು ಇದು ಸಮಸ್ಯೆಯಾಗಿದೆ. ಅಂತಿಮವಾಗಿ ಇದರಿಂದ ದೇಶಕ್ಕೆ ಕೆಟ್ಟಹೆಸರು ಬರುತ್ತಿದೆ” ಎಂದು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಆತಂಕ ವ್ಯಕ್ತಪಡಿಸಿದರು.
ಯೂಟೂಬ್ ಗಳನ್ನು ಯಾರು ಬೇಕಾದರೂ ಆರಂಭಿಸಬಹುದು. ಅಲ್ಲಿ ಯಾವುದಕ್ಕೂ ನಿಯಂತ್ರಣ ಇಲ್ಲ. ನೀವು ಯೂಟೂಬ್ ಗೆ ಹೋಗಿ ನೋಡಿ ಅಲ್ಲಿ ಹೇಗೆ ನಕಲಿ ಸುದ್ದಿಗಳು ಹರಡುತ್ತಿವೆ ಎಂಬುದು ತಿಳಿಯುತ್ತದೆ ಎಂದರು.
ಫೇಸ್ ಬುಕ್, ಯೂಟೂಬ್, ಟ್ವಿಟ್ಟರ್, ವೆಬ್ ಪೋರ್ಟಲ್ ಗಳಲ್ಲಿ “ಸಂಸ್ಥೆಗಳ ಕುರಿತು, ನ್ಯಾಯಾಧೀಶರ ಕುರಿತು, ಯಾವುದೇ ವಿಚಾರವಾದರೂ ಮನಬಂದಂತೆ ಬರೆಯಲಾಗುತ್ತಿದೆ. ಸುಳ್ಳು ಸುದ್ದಿಗಳು ಮತ್ತು ವೆಬ್ ಪೋರ್ಟಲ್ಗಳಿಗೆ ಕಡಿವಾಣ ಹಾಕುವ ಪ್ರಯತ್ನಗಳು ನಡೆಯುತ್ತಿಲ್ಲ” ಎಂದು ರಮಣ ಹೇಳಿದರು.
ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, “ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ದೃಷ್ಠಿಯಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆ 2021ನ್ನು ಸರ್ಕಾರ ಜಾರಿಗೆ ತಂದಿದೆ ಎಂದರಲ್ಲದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಬೇರೆಬೇರೆ ಹೈಕೋರ್ಟ್ ಗಳಲ್ಲಿ ಬೇರೆಬೇರೆ ಆದೇಶಗಳು ಬಂದಿವೆ. ಹಾಗಾಗಿ ಎಲ್ಲಾ ಹೈಕೋರ್ಟ್ ಗಳಲ್ಲಿರುವ ಈ ರೀತಿಯ ಅರ್ಜಿಗಳನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸಲು ಅದೇಶಿಸುವಂತೆ” ಕೋರಿದರು.