ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಗಳಲ್ಲಿ ಉಪಾಹಾರ ಕೂಟ ಏರ್ಪಡಿಸಿರುವುದು ಬೀಗತನ ಮಾಡಿದಂತೆ ಆಗಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ಹಳ್ಳಿಯ ಕಡೆ ಗಂಡು ನೋಡಲು ಒಂದು ಸಾರಿ, ಹೆಣ್ಣು ನೋಡಲು ಒಂದು ಸಾರಿ, ಮನೆನೋಡಲು ಹೋಗುತ್ತಾರೆ. ಹಾಗಾಗಿದೆ ಈ ಇಬ್ಬರ ಕಥೆ ಎಂದು ತಿಳಿಸಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ರಿವರ್ಸ್ ಏನೂ ಆಗಲ್ಲ, ಇರುವ ವ್ಯವಸ್ಥೆಯೇ ಮುಂದುವರೆದುಕೊಂಡು ಹೋಗುತ್ತದೆ ಎಂದು ಮಾರ್ಮಿಕವಾಗಿ ನುಡಿದ್ದಾರೆ.
ಸಚಿವ ಸಂಪುಟದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ ಈ ಮೊದಲೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಬೆಳಗಾವಿಯ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದೊಮ್ಮೆ ಏನಾದರೂ ಅನಿವಾರ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪದಚ್ಯುತಿ ಆದಾಗ ದಲಿತ ಸಿಎಂ ಆಗಿ ಪರಮೇಶ್ವರ್ ಆಗಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಹೇಳಿದ್ದೇನೆ ಎಂದರು.


