ತುಮಕೂರು ಜಿಲ್ಲಾ ಪಂಚಾಯಿತಿಯು 2024-25ನೇ ಸಾಲಿನಲ್ಲಿ 9,885 ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಶಕ್ತಿ ಇಲಾಖೆ ನೀಡುವ ಜಲ ಸಂಚಾಯಿ- ಜನ ಭಾಗಿದಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಸಮ್ಮುಖದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ನೀಡಿದ ಪ್ರಶಸ್ತಿಯನ್ನು ಜಿ.ಪಂ. ಸಿಇಒ ಜಿ. ಪ್ರಭು ಸ್ವೀಕರಿಸಿದರು.
ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ತುಮಕೂರು ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 2738 ಗ್ರಾಮಗಳಲ್ಲಿ 9,885 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಜಲ ಮೂಲದ ಸಂರಕ್ಷಣೆಯಡಿ ಅಂತರ್ಜಲ ವೃದ್ಧಿಗಾಗಿ, ನೀರು ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಕಂದಕ ಬದು, ಕೆರೆ ಹೂಳೆತ್ತುವುದು, ಕಟ್ಟೆ ಅಭಿವೃದ್ಧಿ, ಕಾಲುವೆ ಅಭಿವೃದ್ಧಿ, ಬೆಟ್ಟಗಳಲ್ಲಿ ಸಮಪಾತಳಿ ಕಂದಕ ಬದುಗಳ ನಿರ್ಮಾಣ, ಕಲ್ಯಾಣಿಗಳ ಅಭಿವೃದ್ಧಿ, ಚೆಕ್ ಡ್ಯಾಮ್ ನಿರ್ಮಾಣ, ಇಂಗು ಗುಂಡಿ ಸೇರಿದಂತೆ ಹಲವು ಕಾಮಗಾರಿಗಳಿಂದ ನೀರು ಶೇಖರಣೆಗೊಂಡು ಅಂತರ್ಜಲ ಮಟ್ಟ ಹೆಚ್ಚಲು ಕಾರಣವಾಗಿದೆ.
ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಮಿಷನ್-500 ಅಭಿಯಾನ ಕೈಗೊಂಡು ರೈತರ ಜಮೀನುಗಳಲ್ಲಿ ಬದು ಕಾಮಗಾರಿಗಳನ್ನು ಅನುಷ್ಟಾನಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳ ಪರಿಣಾಮವಾಗಿ ಜಲ ಸಂರಕ್ಷಣೆ-ಜನರ ಭಾಗವಹಿಸುವಿಕೆ ಅಭಿಯಾನ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಸಮಾರಂಭದಲ್ಲಿ ಕೊರಟಗೆರೆ ತಾಲ್ಲೂಕು ಪಂಚಾಯಿತಿ ಇಒ ಅಪೂರ್ವ ಭಾಗಿಯಾಗಿದ್ದರು.


