ಮುಖ್ಯಮಂತ್ರಿ ಸಿದ್ದರಾಮಯ್ಯನಂಥವರು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಹೊರಟಿವುದು ನಿಜಕ್ಕೂ ನಂಬಲು ಸಾಧ್ಯವಿಲ್ಲ. ಲಿಂಗಾಯಿತರು ನಮ್ಮನ್ನು ಓಬಿಸಿಗೆ ಸೇರಿಸಿ ಎನ್ನುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಚ್ಚರಿ ವ್ಯಕ್ತಪಡಿಸಿದರು.
ತುಮಕೂರು ನಗರದ ಕನ್ನಡಭವನದಲ್ಲಿ ಜೆ.ಎಚ್.ಪಟೇಲ್ ಪ್ರತಿಷ್ಠಾನದ ವತಿಯಿಂದ ಜೆ.ಎಚ್.ಪಟೇಲ್ ಅವರ 96ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ ಎಂಬ ವಿಷಯ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜನರನ್ನು ಯಾರು ಅನುಸರಿಸುತ್ತಾರೋ ಅವರು ಜನನಾಯಕರು ಎನ್ನುವಂತಹ ಪರಿಸ್ಥಿತಿ ಬದಲಾಗಿದೆ. ಜಾತಿಯ ಸೊಂಕು ಮಿತಿಮೀರಿದೆ ಎಂದು ವಿಷಾದಿಸಿದರು.
ಕೆ.ಎನ.ರಾಜಣ್ಣ ಸತ್ಯ ಹೇಳಿ ಮಂತ್ರಿಗಿರಿ ಕಳೆದುಕೊಂಡರು, ಓರ್ವ ಚುನಾಯಿತ ಪ್ರತಿನಿಧಿಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಹೈಕಮಾಂಡ್ ಸಂಸ್ಕೃತಿಗೆ ಕಡಿವಾಣ ಹಾಕಬೇಕಾಗಿದೆ ಎಂದು ತಿಳಿಸಿದರು.
ಚುನಾವಣಾ ದೃಷ್ಟಿಯಲ್ಲಿ ರೂಪಿತವಾಗುವ ಎಲ್ಲಾ ಯೋಜನೆಗಳನ್ನು ರದ್ದುಮಾಡಿ, ಜನಪರ ಬಜೆಟ್ ಹೆಸರಿನಲ್ಲಿ ಸರಕಾರ ಹಣ ಹಂಚಿಕೆಯಾಗುವುದನ್ನು ತಡೆಯುವುದರಿಂದ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರಲು ಸಾಧ್ಯ ಎಂದರು.
ಗೃಹಲಕ್ಷ್ಮಿ, ಶಕ್ತಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ. ಹಾಗೆಯೇ ವಿಶ್ವದ ಏಳನೇ ದೊಡ್ಡ ರಾಷ್ಟ್ರವಾಗಿರುವ ಭಾರತ ಸಾಲದಲ್ಲಿಯೂ ಏಳನೇ ಸ್ಥಾನದಲ್ಲಿ ಇರುವುದು ವಿಪರ್ಯಾಸ. ದೇಶ ಎತ್ತ ಸಾಗುತ್ತಿದೆ ಎಂಬುದು ತಿಳಿಯದಾಗಿದೆ ಎಂದು ಹೇಳಿದರು.
ಯುವಜನತೆ ದೇಶದ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ನಿರಾಶಾವಾದಿಗಳಾದರೆ ಪ್ರಯೋಜನವಿಲ್ಲ. ಅವರನ್ನು ಆಶಾವಾದಿಗಳಾಗಿಸುವ ಪ್ರಯತ್ನ ನಡೆಯಬೇಕಿದೆ. ಮತದಾರರಲ್ಲಿ ಸ್ವಾಭಿಮಾನದ ಬದುಕು ರೂಪಿಸುವ ಕೆಲಸ ಆಗಬೇಕು. ಇದು ಒಂದು ದಿನದಲ್ಲಿ ಆಗುವ ಕ್ರಾಂತಿಯಲ್ಲ ಎಂದರು.
ಪಕ್ಷ ಮತ್ತು ಮತದಾರರ ನಡುವೆ ಕೊಂಡಿಯಾಗಿದ್ದ ಪಕ್ಷದ ಕಾರ್ಯಕರ್ತರು ಸಹ ಇಂದು ಸ್ವಾರ್ಥಿಗಳಾಗಿದ್ದಾರೆ. ಪಕ್ಷ ಗೆಲ್ಲಬೇಕು ಎನ್ನುವುದಕ್ಕಿಂತ, ನಮಗೆ ಏನು ಸಿಗುತ್ತದೆ ಎಂಬುದರ ಬಗ್ಗೆ ಹೆಚ್ಚು ಆಲೋಚನೆ ನಡೆಸುತ್ತಿದ್ದಾರೆ. ಕಾರ್ಯಕರ್ತರನ್ನು ಸಂಭಾಳಿಸುವುದೇ ದೊಡ್ಡ ಸವಾಲಾಗಿದೆ. ಹಿಂದೆ ಜನರು ಯಾರನ್ನು ಅನುಸರಿಸುತ್ತಾರೋ ಅವರನ್ನು ಜನ ನಾಯಕ ಎನ್ನಲಾಗುತ್ತಿತ್ತು ಎಂದು ಹೇಳಿದರು.


