ಮೂರು ನಾಲ್ಕು ದಶಕಗಳ ಹಿಂದೆ ತುಮಕೂರು ನಗರದಲ್ಲಿ ಖೋ ಖೋ ಆಟ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಹಲವು ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಆಟ ಆಡಿ ತುಮಕೂರಿಗೆ ಕೀರ್ತಿ ತಂದಿದ್ದರು. ಕ್ರೀಡಾ ಕೂಟಗಳೂ ಜನಪ್ರಿಯವಾಗಿದ್ದವು. ತುಮಕೂರು ನಗರದಲ್ಲಿ ಮತ್ತೆ ಅಂತಹ ವಾತಾವರಣ ಮರುಕಳಿಸಬೇಕಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ವಿವೇಕಾನಂದ ಕ್ರೀಡಾ ಸಂಸ್ಥೆ ಹಾಗೂ ರಾಜ್ಯ ಖೋ ಖೋ ಸಂಸ್ಥೆ ಆಶ್ರಯದಲ್ಲಿ ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವ್ಯಕ್ತಿಯ ಬೆಳವಣಿಗೆಗೆ ಜ್ಞಾನದಷ್ಟೇ ಕ್ರೀಡೆಯೂ ಮುಖ್ಯ. ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಸಾಮರ್ಥ್ಯ, ಆರೋಗ್ಯ ವೃದ್ಧಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್, ವಿವೇಕಾನಂದ ಕ್ರೀಡಾ ಸಂಸ್ಥೆ ಅಧ್ಯಕ್ಷ ಹೆಚ್.ಡಿ.ಕುಮಾರ್, ಗೌರವಾಧ್ಯಕ್ಷ ರಾಮಕೃಷ್ಣಯ್ಯ, ಉಪಾಧ್ಯಕ್ಷ ಎನ್.ನರಸಿಂಹರಾಜು, ಮಾಜಿ ಅಧ್ಯಕ್ಷ ಧನಿಯಾಕುಮಾರ್, ಕಾರ್ಯದರ್ಶಿ ವಿನಯ್, ಜಂಟಿ ಕಾರ್ಯದರ್ಶಿ ಪ್ರೀತಂ, ಖಜಾಂಚಿ ಎಸ್.ಎನ್.ಹರೀಶ್, ಹಿರಿಯ ಕ್ರೀಡಾ ತರಬೇತುದಾರ ರವೀಶ್, ಪ್ರದೀಪ್ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಸೋಮಶೇಖರ್, ವೀರಭದ್ರಯ್ಯ, ಚಂದ್ರಶೇಖರ, ಸುರೇಶ್ ಇದ್ದರು.


