ಕೊರೊನ ಪಾಸಿಟಿವಿಟಿ ದರ 2ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಸೆಪ್ಟೆಂಬರ್ 6 ರಿಂದ 6,7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಲಿದ್ದು, ವಾರದ ಐದು ದಿನ ಮಾತ್ರ ತರಗತಿಗಳು ನಡೆಯಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಕೋವಿಡ್ ಮಾರ್ಗಸೂಚಿಗಳ ಅನ್ವಯ ಶಾಲೆಗಳು ಪ್ರಾರಂಭವಾಗಲಿದ್ದು, ಶೇ.50ರಷ್ಟು ಮಕ್ಕಳ ಹಾಜರಾತಿಯೊಂದಿಗೆ ತರಗತಿಳು ನಡೆಯಲಿವೆ ಎಂದು ಹೇಳಿದರು.
ವಾರದಲ್ಲಿ ಐದು ದಿನ ಮಾತ್ರ ತರಗತಿಗಳು ನಡೆಯಲಿವೆ. ಶನಿವಾರ ಮತ್ತು ಭಾನುವಾರ ಶಾಲೆಗಳನ್ನು ಶುಚಿಗೊಳಿಸುವುದು ಮತ್ತು ಕೊರೊನ ಸೋಂಕು ನಿವಾರಕ ಔಷಧಿಯನ್ನು ಸಿಂಪಡೆ ಮಾಡಲಾಗುವುದು. ಒಂದು ಶಾಲೆಯಲ್ಲಿ 30 ವಿದ್ಯಾರ್ಥಿಗಳಿದ್ದರೆ 15 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬಹುದು ಎಂದರು.
ರಾಜ್ಯದಲ್ಲಿ 6472 ಮಕ್ಕಳ ಸ್ಯಾಂಪಲ್ ಗಳನ್ನು ಪಡೆದು ಪರೀಕ್ಷೆ ನಡೆಸಿದಾಗ ಕೇವಲ 14 ಮಕ್ಕಳಲ್ಲಿ ಮಾತ್ರ ಪಾಸಿಟೀವ್ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ವಿವರಿಸಿದರು.
ಕಲ್ಯಾಣ ಮಂಟಪಗಳಿಗೆ ಶೇ.50ರಷ್ಟು ಅನುಮತಿ:
ಕಳೆದ ಒಂದೂವರೆ ವರ್ಷದಿಂದ ಕಲ್ಯಾಣ ಮಂಟಪಗಳಲ್ಲಿ ಮದುವೆಗಳು ನಡೆದಿಲ್ಲ. ಕಲ್ಯಾಣಮಂಟಪದ ಮಾಲಿಕರು ಬಂದು ಹಲವು ಬಾರಿ ಮನವಿ ಮಾಡಿ ನಮಗೆ ಸಾಕಷ್ಟು ನಷ್ಟವಾಗಿದೆ. ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಕಲ್ಯಾಣ ಮಂಟಪಗಳಿಗೆ ಅನುಮತಿ ನೀಡಬೇಕು ಎಂದು ಕೋರಿಕೊಂಡಿದ್ದರ ಹಿನ್ನೆಲೆಯಲ್ಲಿ ಶೇ.50ರಷ್ಟು ಜನರು ಮದುವೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದೆ.
ಈಗಾಗಲೇ ಥೀಯೇಟರ್ ಗಳಲ್ಲಿ ಶೇ.50ರಷ್ಟು ಜನರ ವೀಕ್ಷಣೆಗೆ ಅವಕಾಶ ನೀಡಿದೆ. ಅದೇ ಮಾದರಿಯಲ್ಲಿ ಕಲ್ಯಾಣ ಮಂಟಪಗಳಿಗೂ ಅವಕಾಶ ನೀಡಿದ್ದೇವೆ. ಶೇ.50ರಷ್ಟು ಜನ ಅಂದರೆ ಕಲ್ಯಾಣಮಂಟಪದಲ್ಲಿ 400 ಜನರಿಗಿಂತಲೂ ಮೀರಬಾರದು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.