ಸಾಲ ಬೇಕಾದಾಗ ಸಹಕಾರ ಸಂಘಗಳಿಗೆ ಬರುತ್ತೀರಿ, ಆರ್ಥಿಕ ವ್ಯವಹಾರವನ್ನು ಮಾತ್ರ ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡುತ್ತೀರಿ, ಇದು ಸರಿನಾ? ಸಹಕಾರ ಸಂಸ್ಥೆಗಳಲ್ಲೇ ಖಾತೆ ತೆರೆದು ಒಡವೆ ಸಾಲ, ವಾಹನಗಳ ಸಾಲ, ಮತ್ತಿತರ ವ್ಯವಹಾರಗಳನ್ನು ನಮ್ಮಲ್ಲಿಯೇ ಮಾಡಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ತುಮಕೂರು ನಗರದ ಡಯಟ್ ಸಂಸ್ಥೆ ಆವರಣದಲ್ಲಿ ನಡೆದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 71ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳನ್ನು ಬೆಳೆಸಿದರೆ ಅವು ನಿಮ್ಮನ್ನೂ ಬೆಳೆಸುತ್ತವೆ. ಇನ್ನು ಮುಂದೆ ಸಹಕಾರ ಸಂಸ್ಥೆಗಳಲ್ಲಿ ಖಾತೆ ತೆರೆದು ಹಣಕಾಸಿನ ವ್ಯವಹಾರ ಮಾಡಿರಿ ಎಂದು ಮನವಿ ಮಾಡಿದರು.
ಹೈನುಗಾರಿಕೆ ಆರಂಭಿಸಲು ಹಸು ಸಾಕಾಣಿಕೆ ಮಾಡುವ ಎಷ್ಟೇ ಜನ ಬಂದರೂ ಹಸು ಖರೀದಿಗೆ ಸಾಲ ಕೊಡುತ್ತೇವೆ. ಆದರೆ ಮೇವಿನ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಹೈನುಗಾರಿಕೆಯಿಂದ ಹಳ್ಳಿಗಳಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ಕುಟುಂಬದ ಖರ್ಚು ವೆಚ್ಚ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಖರ್ಚುಗಳಿಗೂ ಹಾಲು ಉತ್ಪಾದನೆಯಿಂದ ಅನುಕೂಲವಾಗುತ್ತದೆ ಎಂದರು.
ತುಮಕೂರು ಡಿಸಿಸಿ ಬ್ಯಾಂಕ್ ತನ್ನ 71 ವರ್ಷಗಳ ಸ್ಮರಣೀಯ ಸೇವೆ ಪೂರೈಸಿರುವ ಈ ಸಂದರ್ಭದಲ್ಲಿ ಬ್ಯಾಂಕಿನ ಇತಿಹಾಸದ ಸಿಂಹಾವಲೋಕನ ಮಾಡಿದಾಗ, ಅದರ ದೃಢತೆ ಮತ್ತು ನೇರ ಹೆಜ್ಜೆಗಳ ಸಾಧನೆ ಮುಂದಿನ ಸುಭದ್ರತೆಯ ಹಾದಿಗೆ ಕೈಗನ್ನಡಿಯಾಗಿರುತ್ತದೆ. ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಿರುವ ಕೃಷಿ ಸಾಲಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳಾದ ಬಡ್ಡಿ ರಿಯಾಯಿತಿ, ಬಡ್ಡಿ ಮನ್ನಾ ಹಾಗೂ ಇತರೆ ಯೋಜನೆಗಳಡಿಯಲ್ಲಿ ಜಿಲ್ಲೆಯಲ್ಲಿ 2024-25ನೇ ಸಾಲಿಗೆ ಒಟ್ಟು 147872 ಸದಸ್ಯರಿಗೆ ಒಟ್ಟು 6813.85 ಲಕ್ಷ ರೂ.ಬಿಲ್ಲು ಸಲ್ಲಿಸಿದ್ದು, ಸದರಿ ಬಿಲ್ಲಿನಲ್ಲಿ 285.27 ಲಕ್ಷ ರೂ.ಬ್ಯಾಂಕಿಗೆ ಜಮಾ ಬಂದಿದ್ದು ಉಳಿಕೆ 6528.58 ಲಕ್ಷ ರೂ. ಸರ್ಕಾರದಿಂದ ಬಾಕಿ ಬರಬೇಕಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ತುಮುಲ್ ಅಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ಬಿ.ಶಿವಣ್ಣ, ಹನುಮಾನ್, ಎಸ್.ಆರ್.ರಾಜಕುಮಾರ್, ಜಿ.ಎಸ್.ರವಿ, ಸಿದ್ಧಗಂಗಪ್ಪ, ಹೆಚ್.ಸಿ.ಪ್ರಭಾಕರ್, ಬಿ.ನಾಗೇಶ್ಬಾಬು, ಮಾಲತಿ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ, ನಿರ್ದೇಶಕ ಪಿ.ಮೂರ್ತಿ, ಇದ್ದರು.


