ತನ್ನ ಅಭಿವೃದ್ದಿಗೆ ಬೇರೆ ಸಮುದಾಯದ ಆಸರೆ ಬೇಡದೆ,ಸ್ವತಃ ಸಂಘಟಿತರಾಗಿ, ಸ್ವಾಭಿಮಾನದಿಂದ ಬದುಕುತ್ತಿರುವ ಹಿಂದೂ ಸಾದರ ಸಮಾಜ ತನ್ನ ಶೈಕ್ಷಣಿಕ ಅಭಿವೃದ್ದಿಗಾಗಿ ಬಾಲಕ, ಬಾಲಕಿಯರ ಹಾಸ್ಟೆಲ್ ಗಳನ್ನು ತೆರೆದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ತುಮಕೂರಿನ ಕ್ಯಾತ್ಸಂದ್ರದಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಿಂದೂ ಸಾದರು ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಶೈಕ್ಷಣಿಕವಾಗಿ, ಅರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಇದಕ್ಕೆ ಮಂಡಿ ಹರಿಯಣ್ಣನವರಿಂದ ಹಿಡಿದು ಇಂದಿನ ರವಿಕುಮಾರ್ ಅವರವರೆಗೆ ಎಲ್ಲರೂ ಸಹ ಶ್ರಮಿಸಿದ್ದಾರೆ. ಸಮುದಾಯದ ವತಿಯಿಂದ ನಿರ್ಮಿಸಿರುವ ಹಾಸ್ಟಲ್ಗಳಿಗೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಆಯಾಯ ಕಾಲದ ಸರಕಾರಗಳು ನೆರವು ನೀಡಿವೆ. ಹಿರಿಯರ ಕೋರಿಕೆಯಂತೆ ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಸೋಮಣ್ಣ ಪ್ರತಿಷ್ಠಾನದಿಂದ 25 ಲಕ್ಷ ರೂಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಮುದಾಯದ ಅಭಿವೃದ್ದಿಗೆ ಶ್ರಮಿಸಿದ ದಾನಿಗಳನ್ನು ಸ್ಮರಿಸುವುದು ನಿಜಕ್ಕೂ ಒಳ್ಳೆಯ ಸಂಪ್ರದಾಯ. ಸಾದರ ಸಮುದಾಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸುತ್ತಿರುವುದು ಪುಣ್ಯದ ಕೆಲಸ. ಸಾದರ ಸಮಾಜ ಬುದ್ದಿವಂತ ಮತ್ತು ಸುಸಂಸ್ಕೃತ ಸಮಾಜ. ತನ್ನ ಒಳ್ಳೆಯತನದಿಂದಲೇ ಎಲ್ಲಾ ಸಮುದಾಯಗಳ ವಿಶ್ವಾಸವನ್ನು ಗಳಿಸಿದೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ವೇಳೆ ನಮ್ಮ ತಂದೆಗೆ ಸಾದರ ಸಮುದಾಯ ನೀಡಿದ ಕೊಡುಗೆಯನ್ನು ಹಾಗೂ ಮಧುಗಿರಿಯಲ್ಲಿ ಪ್ರಥಮ ಬಾರಿಗೆ ಚುನಾವಣೆ ಎದುರಿಸಿದಾಗ ನನಗೆ ನೀಡಿದ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಶಿಕ್ಷಣವನ್ನು ಅದ್ಯತಾ ವಿಷಯವಾಗಿ ತೆಗೆದುಕೊಂಡಿರುವುದು ನಿಜಕ್ಕೂ ಮೆಚ್ಚುವಂತಹದ್ದು, ಭಾರತ ಇಂದು ಇಡೀ ವಿಶ್ವಕ್ಕೆ ತಾಂತ್ರಿಕ ಮಾನವ ಸಂಪನ್ಮೂಲವನ್ನು ನೀಡುವಷ್ಟು ಎತ್ತರಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆಯೇ ಕಾರಣ ಎಂದರು.
ಸಾದರ ಕ್ಷೇಮಾಭಿವೃದ್ದಿ ಸಂಘದಿಂದ ನೂತನ ಬಾಲಕಿಯರ ಹಾಸ್ಟೆಲ್ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸರಕಾರದ ವತಿಯಿಂದ ಒಂದು ಕೋಟಿ ರೂ ಅನುದಾನ ಕೊಡಿಸುತ್ತೇನೆ. ಹಾಗೆಯೇ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಗಳಿಗೆ ಶಾಸಕರ ನಿಧಿಯಿಂದ ಒಟ್ಟು 15 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದರು.
ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ರವಿಕುಮಾರ್.ಡಿ.ಈ, ಕನ್ನಡಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ದೆಹಲಿ ವಿಶೇ಼ಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿದರು. ಮಾಜಿ ಸಂಸದಜಿ.ಎಸ್.ಬಸವರಾಜು, ಎನ್.ಆರ್.ಐ.ಪೋರಂನ ಉಪಾಧ್ಯಕ್ಷ ಎಸ್.ಐ.ಪ್ರಕಾಶ್, ಸೊಗಡು ಶಿವಣ್ಣ, ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ರವಿಕುಮಾರ್, ಡಿ.ಶಿವಕುಮಾರ್, ಎ.ಡಿ.ಬಲರಾಮಯ್ಯ,ಎ ಸ್.ಟಿ.ಡಿ ನಾಗರಾಜು, ಡೆಲ್ಟ ರವಿ, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಪಿ.ಮೂರ್ತಿ, ರವಿಶಂಕರ್ ಇದ್ದರು.


