ರಾಜ್ಯ ರಾಜಕಾರಣದಲ್ಲಿ ಆಗಸ್ಟ್ ಸೆಪ್ಟೆಂಬರ್ ನಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎಂದು ಹೇಳಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ಮತ್ತೊಮ್ಮೆ ತಮ್ಮ ಹೇಳಿಕೆ ಪುನರುಚ್ಚರಿಸಿದ್ದಾರೆ. ಈ ಬದಲಾವಣೆ ಕೇವಲ ಕಾಂಗ್ರೆಸ್ ನಲ್ಲಿ ಮಾತ್ರವಲ್ಲ ಬಿಜೆಪಿ ಹಾಗೂ ಕೇಂದ್ರ ಸರಕಾರದಲ್ಲೂ ಆಗಬಹುದು ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ರಾಂತಿ ಎಂದರೆ ಹಲವಾರು ರೀತಿಯ ಕ್ರಾಂತಿ ಇದೆ. ಜಗಜೀವನ್ ರಾಂ ಹಸಿರು ಕ್ರಾಂತಿ ಮಾಡಿಲ್ಲವಾ, ರಷ್ಯಾದ ಕ್ರಾಂತಿಯೂ ಸಹ ಅಕ್ಟೋಬರ್ ನಲ್ಲಿ ಆಗಿರೋದು. ನಾನು ಹೇಳಿದ ತಕ್ಷಣ ಬರೀ ಕಾಂಗ್ರೇಸ್ ನಲ್ಲಿ ಮಾತ್ರ ಕ್ರಾಂತಿ ಆಗುತ್ತದೆ ಅಂದುಕೊಳ್ಳಬಾರದು. ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲಾ ಪಕ್ಷದಲ್ಲೂ ಅಸಮಾಧಾನ ಇದೆ. ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಅಷ್ಟೇ. ಅದರಲ್ಲಿ ತಪ್ಪಿಲ್ಲ. ಆದರೆ ಪಕ್ಷದ ಚೌಕಟ್ಟಿನಲ್ಲಿ ಹೇಳಬಹುದಾಗಿತ್ತು. ಅಭಿವೃದ್ಧಿ ಕೆಲಸಕ್ಕೆ ಯಾವುದೇ ಹಣದ ತೊಂದರೆ ಇಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಬದಲಾವಣೆಯಂತು ಆಗುತ್ತದೆ. ಆದರೆ ಯಾವಾಗ ಆಗತ್ತದೆ ಎಂಬುದು ಗೊತ್ತಿಲ್ಲ. ಸತೀಶ್ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷರಾಗಬಹುದು ಅಂದುಕೊಂಡಿದ್ದೀನಿ. ಅವರೇ ಆಗಬಹುದು. ಆದರೆ ಎಲ್ಲವನ್ನೂ ಕಾಲ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಸಿಎಂ ಬದಲಾವಣೆಯ ವಿಚಾರ ಹೈ ಕಮಾಂಡ್ ಗೆ ಬಿಟ್ಟದ್ದು. ಸುರ್ಜೆವಾಲ ಜೂನ್ 30 ರಂದು ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಕೆಲವರೊಂದಿಗೆ ಮಾತುಕತೆ ನಡೆಸಬಹುದು. ನನಗೇನು ತಾಕೀತು ಮಾಡುತ್ತಾರೆ ಎಂದರು.
ನಮ್ಮ ಕಾಂಗ್ರೆಸ್ ನಲ್ಲಿ ಒಟ್ಟು ಮೂರು ಪವರ್ ಸೆಂಟರ್ಗಳಿವೆ. ಒಂದು ಹೈಕಮಾಂಡ್, ಎರಡು ಸಿಎಂ ಹಾಗೂ ಮೂರು ಕೆಪಿಸಿಸಿ ಅಧ್ಯಕ್ಷ ಪವರ್ ಸೆಂಟರ್. ಕೆಲ ಮಾಧ್ಯಮದವರು ರಾಜಣ್ಣನವರು ಸಿದ್ದರಾಮಯ್ಯನವರಿಂದ ದೂರಾಗಿದ್ದಾರೆಂದು ಸುದ್ದಿ ಮಾಡಿದ್ದಾರೆ. ಸಿದ್ಧರಾಮಯ್ಯ ಇರುವುದರಿಂದಲೇ ನಾನು ರಾಜಕಾರಣ ಮಾಡುತ್ತಿರುವುದು. ಅವರಿಲ್ಲದಿದ್ದರೆ ರಾಜಕೀಯ ಬಿಡುತ್ತೀನಿ ಎಂದು ಹೇಳಿದರು.


