ನಾವೆಲ್ಲರೂ ಒಂದೇ ಎಂದು ಭಾವಿಸಿ, ಸಹೋದರಿತ್ವದ ನೆಲೆಯಲ್ಲಿ ಈ ಕಥೆಗಳನ್ನು ಓದಿದರೆ, ಇಲ್ಲಿನ ಸಂಕಟ ನಮಗೆ ತಾಕುತ್ತದೆ. ಇವು ನಮ್ಮ ಕಣ್ಣನ್ನು ತೆರೆಸುತ್ತವೆ ಎಂದು ಲೇಖಕಿ ಗೀತಾವಸಂತ್ ಹೇಳಿದರು.
ಕರ್ನಾಟಕ ಸಾಹಿತ್ಯ ಆಕಾಡೆಮಿ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಣಿಗಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಪನ್ಯಾಸ ಮಾಲಿಕೆಯಲ್ಲಿ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಬದುಕು ಬರಹ ಕುರಿತು ಅವರು ಮಾತನಾಡಿದರು.
ನಮ್ಮದೇ ನೆಲದ, ನಮ್ಮದೇ ನಾಡಿನ ಮುಸ್ಲಿಂ ಹೆಣ್ಣುಮಕ್ಕಳ ಬಡತನ, ನೋವು, ಸಂಕಟ, ಅನ್ಯಾಯ, ದೌರ್ಜನ್ಯ, ಬದುಕು ಬವಣೆಗಳ ಕುರಿತು ಬಾನು ಮುಷ್ತಾಕ್ ಅವರು ಕನ್ನಡದಲ್ಲಿ ಬರೆದ ಕಥೆಗಳ ಸಂಕಲನ “ಎದೆಯ ಹಣತೆ ” ಈ ಕಥೆಗಳು Heart lamp ಹೆಸರಲ್ಲಿ ದೀಪಾ ಭಸ್ತಿ ಅವರು ಇಂಗ್ಲೀಷ್ ಗೆ ಅನುವಾದಿಸಿದ್ದು, ಈ ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದೆ. ಇಡೀ ಜಗತ್ತಿನ ಗಮನ ಸೆಳೆದಿದೆ. ಕನ್ನಡ ಕಥನದ ಸತ್ವವನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಬಾನು ಮುಷ್ತಾಕ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಬಾನು ಮುಷ್ತಾಕ್ ಅವರು ವಕೀಲರಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ, ಪತ್ರಕರ್ತೆಯಾಗಿ, ಜಾಗೃತ ಮಹಿಳೆಯಾಗಿ ತಾವು ಕಂಡದ್ದನ್ನು, ಅನುಭವಿಸಿದ್ದನ್ನು ಕಥೆಗಳಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದು ತಿಳಿಸಿದರು.
ಧರ್ಮದ ಬಗ್ಗೆ ಪ್ರಶ್ನಿಸುವುದು, ಅದರಲ್ಲೂ ಹೆಣ್ಣು ಮಕ್ಕಳು ಮಾತನಾಡುವುದು, ಇಂದಿಗೂ ಅಪರಾಧ ಎಂಬಂತಿರುವಾಗ, ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಅನ್ಯಾಯವನ್ನು. ಸಮುದಾಯದ ಹುನ್ನಾರಗಳನ್ನು, ಸಣ್ಣತನಗಳನ್ನು ಬಾನು ಅವರ ಕಥೆಗಳು ಬಿಚ್ಚಿಡುತ್ತವೆ. ಹೆಣ್ಣು ಜಗತ್ತನ್ನು ಎಚ್ಚರಿಸುತ್ತವೆ. ನಮ್ಮ ಹೆಜ್ಜೆಗಳನ್ನು ದಿಟ್ಟವಾಗಿ ಇಡಲು ಪ್ರೇರೇಪಿಸುತ್ತವೆ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಎಲ್.ಎನ್ .ಮುಕುಂದರಾಜ್ ಅವರು, ಗೀತಾ ವಸಂತ ಅವರ ಕವಿತೆಯೊಂದನ್ನು ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಹೆಣ್ಣುಮಕ್ಕಳ ಮೇಲೆ ಸಾವಿರಾರು ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ, ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸಂಕಟ ಬಹಳ ದೊಡ್ಡದು. ಜಾತಿ, ಧರ್ಮ, ಲಿಂಗದ ಹೆಸರಿನಲ್ಲಿ ನಾವೇ ಶ್ರೇಷ್ಠ ಎಂಬುದನ್ನು ಬಿಟ್ಟು
ನಾವು ಎಲ್ಲರನ್ನೂ, ಎಲ್ಲ ಧರ್ಮದವರನ್ನೂ ಗೌರವಿಸಬೇಕು. ಸೈರಣೆ, ಸಹಿಷ್ಣುತೆ ಇರಬೇಕು. ನಮ್ಮ ಭಾಷೆ, ಸಾಹಿತ್ಯದ ಬಗ್ಗೆ ಪ್ರೀತಿ ಇರಬೇಕು ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯರಾದ ಸುಮಾ ಸತೀಶ್ ಪ್ರಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಚಕೋರ ಸಾಹಿತ್ಯ ವಿಚಾರ ವೇದಿಕೆಯ ತುಮಕೂರು ಜಿಲ್ಲಾ ಸಂಚಾಲಕಿ ಮಲ್ಲಿಕಾ ಬಸವರಾಜು, ಕುಣಿಗಲ್ ರಾಮಚಂದ್ರ ಇದ್ದರು.


