ಸಹವರ್ತಿ ಟಿವಿ ವರದಿಗಾರ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಆರೋಪಿ ಮಾನಸಿಕ ಅಸ್ವಸ್ಥ ಮಂಜುನಾಥ್ ತಾಳಮಕ್ಕಿಯನ್ನು ಗಡೀಪಾರು ಮಾಡಿ, ಸೂಕ್ತಿ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ, ದಲಿತಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಪ್ರಗತಿಪರ ಚಿಂತಕ ದೊರೈರಾಜು ಮಾತನಾಡಿ, ಮಾಧ್ಯಮ ರಂಗದಲ್ಲಿ ಕೆಲಸ ನಿರ್ವಹಿಸುವ ದಲಿತ ಸಮುದಾಯದ ಸಮಯ ಮಂಜುನಾಥ್ ಮೇಲೆ ಮಂಜುನಾಥ್ ತಾಳಮಕ್ಕಿ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಜಾತಿನಿಂದನೆ ಪ್ರಕರಣವನ್ನಷ್ಟೇ ಎಫ್ಐಆರ್ನಲ್ಲಿ ನಮೂದಿಸುವ ಮೂಲಕ ಹಲ್ಲೆ ಪ್ರಕರಣವನ್ನು ಮರೆಮಾಚಿದ್ದಾರೆ. ಸದರಿ ಪ್ರಕರಣದಲ್ಲಿ ಹಲ್ಲೆ ಮಾಡಿರುವುದನ್ನು ಎಫ್ಐಆರ್ನಲ್ಲಿ ನಮೂದಿಸಲು ಜಿಲ್ಲಾ ದಂಡಾಧಿಕಾರಿಗಳು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಹಾಗೂ ಪ್ರಕರಣದಲ್ಲಿ ಹಲ್ಲೆ ಮಾಡಿರುವ ಮಂಜುನಾಥ್ ತಾಳಮಕ್ಕಿ ಮಾನಸಿಕ ಅಸ್ವಸ್ಥನಾಗಿದ್ದು, ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಂಜುನಾಥ್ ತಾಳಮಕ್ಕಿಗೆ ನಿಮ್ಹಾನ್ಸ್ನ ತಜ್ಞರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿದರು.
ಮಾಧ್ಯಮ ವ್ಯಕ್ತಿಯಾಗಿರುವುದರಿಂದ ದಿನನಿತ್ಯ ಗಣ್ಯರನ್ನು, ಅತಿಗಣ್ಯರನ್ನು ಭೇಟಿ ಮಾಡಬೇಕಾದ ಅನಿವಾರ್ಯತೆ ಇದ್ದು, ಈ ಸಂದರ್ಭದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಗಣ್ಯರು, ಅತಿ ಗಣ್ಯರಿಗೆ ಅಪಾಯ ಉಂಟು ಮಾಡಬಹುದಾದ ಅವಕಾಶ ಹೆಚ್ಚಿರುವುದರಿಂದ ಮಂಜುನಾಥ್ ತಾಳಮಕ್ಕಿ ಅವರಿಗೆ ಸೂಕ್ತ ಚಿಕಿತ್ಸೆಗೆ ಶಿಫಾರಸ್ಸು ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಬೇಕು ಎಂದರು.
ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಮಾಜಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಸಮಾಜದ ಸ್ವಾಸ್ಥವನ್ನು ಕಾಪಾಡಬೇಕಾದ ಹೊಣೆಗಾರಿಕೆಯನ್ನು ಹೊತ್ತಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡಲು ಮಾನಸಿಕ ಅಸ್ವಸ್ಥರಾಗಿರುವ ಮಂಜುನಾಥ್ ತಾಳಮಕ್ಕಿ ಅಂತವರನ್ನು ಸಮಾಜದಲ್ಲಿ ಸ್ವೇಚ್ಚೆಯಾಗಿ ಓಡಾಡಲು ಬಿಡುವುದರಿಂದ ದಲಿತ ವಿರೋಧಿ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಯಾಗಿರುವ ಮಂಜುನಾಥ್ ತಾಳಮಕ್ಕಿ ಇನ್ನಷ್ಟು ದಲಿತರ ಮೇಲೆ ಹಲ್ಲೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಮಂಜುನಾಥ್ ತಾಳಮಕ್ಕಿ ಅವರ ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಚಿಕಿತ್ಸೆಗೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊಲೆ, ದೌರ್ಜನ್ಯ, ಅಸ್ಪೃಶ್ಯತಾಚರಣೆ ದೂರುಗಳ ವಿರುದ್ಧ ಕೌಂಟರ್ ಕೇಸ್ಗಳನ್ನು ಹಾಕದಂತೆ ಕ್ರಮ ವಹಿಸುವ ಮೂಲಕ ದಲಿತರ ಸಂವಿಧಾನಾತ್ಮಕ ರಕ್ಷಣೆಯನ್ನು ಕಲ್ಪಿಸಬೇಕಾಗಿರುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮಧುಗಿರಿ ತಾಲ್ಲೂಕು ಕವಣದಾಲ ಗ್ರಾಮದಲ್ಲಿ ದೇವಾಲಯ ಪ್ರವೇಶವನ್ನು ನಿರ್ಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಎಲ್ಲ ದೇಗುಲಗಳಲ್ಲಿಯೂ ದಲಿತರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶ ಎಂಬ ನಾಮಫಲಕ ಅಳವಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ನರಸೀಯಪ್ಪ, ನರಸಿಂಹಯ್ಯ, ನಿಟ್ಟೂರು ರಂಗಸ್ವಾಮಿ ದೊಡ್ಡಯ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎನ್.ಕೆ. ಸುಬ್ರಹ್ಮಣ್ಯ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಬೇವಿನಹಳ್ಳಿ ಚನ್ನಬಸವಯ್ಯ, ರಾಮಯ್ಯ ಸೇರಿದಂತೆ ಜಿಲ್ಲೆಯ ದಲಿತಪರ, ಪ್ರಗತಿಪರ ಸಂಘನೆಯ ಮುಖಂಡರು ಇದ್ದರು.


