ಸಹೋದ್ಯೋಗಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪಿ ಮಂಜುನಾಥ್ ತಾಳಮಕ್ಕಿ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಿಕ್ಕನಾಯಕನಹಳ್ಳಿಯ ನೆಹರು ಸರ್ಕಲ್ನಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ಜೀ ಕನ್ನಡ ನ್ಯೂಸ್ ವರದಿಗಾರ ಜಿ.ಎನ್. ಮಂಜುನಾಥ್ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ನಾಯಕ್ ತಾಳಮಕ್ಕಿ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ದಲಿತ ವಿರೋಧಿ, ಕೋಮುವಾದಿ ಪತ್ರಕರ್ತ ಮಂಜುನಾಥ್ ನಾಯಕ್ ತಾಳಮಕ್ಕಿ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಿಪಟೂರಿನಲ್ಲೂ ಪತ್ರಕರ್ತ ಮಂಜುನಾಥ್ ತಾಳಮಕ್ಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಿಪಟೂರು ತಾಲ್ಲೂಕು ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಾತಿ ನಿಂದನೆ ಮಾಡಿರುವ ಆರೋಪಿ ಖಾಸಗಿ ಸುದ್ದಿ ವಾಹಿನಿ(ಪಬ್ಲಿಕ್ ಟಿವಿ) ವರದಿಗಾರ ಮಂಜುನಾಥ್ ತಾಳಮಕ್ಕಿ ವಿರುದ್ದ ಗೂಂಡಾ ಕಾಯ್ದೆ ಹಾಕಬೇಕು ಎಂದು ಘೋಷಣೆ ಕೂಗಿದರು.
ಮಂಡ್ಯದಲ್ಲಿದ್ದ ವೇಳೆ ಮಂಜುನಾಥ್ ತಾಳಮಕ್ಕಿ ದಲಿತ ಪತ್ರಕರ್ತನ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದ. ಹೀಗಾಗಿ ಅಲ್ಲಿಯೂ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಇದೇ ಚಾಳಿಯನ್ನು ತುಮಕೂರಿನಲ್ಲೂ ಮುಂದುವರೆಸಿದ್ದಾನೆ ಎಂದು ಕಿಡಿಕಾರಿದರು.
ತುಮಕೂರಿನಲ್ಲಿಯೂ ಹಲವು ಪತ್ರಕರ್ತರ ಮೇಲೆ ಜಗಳ-ವಾಗ್ಯುದ್ದ ಮಾಡಿರುವ ಮಂಜುನಾಥ್ ತಾಳಮಕ್ಕಿ ಪ್ರಕರಣವನ್ನು ಕೂಲಂಕಷವಾಗಿವಾಗಿ ತನಿಖೆ ನಡೆಸಿ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.


