ಚುನಾವಣಾ ರಾಜಕಾರಣದಿಂದ ವಿಮುಖನಾಗಬೇಕು ಎಂದುಕೊಂಡಿದ್ದ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023 ರಲ್ಲಿ ಚುನಾವಣೆಗೆ ನಿಲ್ಲುವಂತೆ ಸೂಚನೆ ನೀಡಿದಾಗ ನಾನು ಗೆದ್ದು ಬಂದರೆ ಸಹಕಾರ ಸಚಿವ ಸ್ಥಾನ ನೀಡಬೇಕು ಎಂದು ಷರತ್ತು ಹಾಕಿದ್ದೆ, ಸರಕಾರ ರಚನೆಯಾದ ನಂತರ ಸಹಕಾರ ಇಲಾಖೆಯೇ ಸಿಕ್ಕಿದೆ. ಜನ ಸೇವೆಯಲ್ಲಿ ತೊಡಗಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಅವರ ನಿವಾಸದಲ್ಲಿ ಮಾತನಾಡಿದ ರಾಜಣ್ಣ, ಮುಂದೆ ಚುನಾವಣೆಗೆ ಸ್ಪರ್ಧಿಸಬಾರದು ಎಂದುಕೊಂಡಿದ್ದ ನನಗೆ ನಿಮ್ಮೆಲ್ಲರ ಆಶೀರ್ವಾದ ಸಿಕ್ಕಿದ ನಂತರ ಹೊಸ ಹುಮ್ಮಸ್ಸು ಬಂದಿದೆ ಎಂದು ಚುನಾವಣಾ ರಾಜಕೀಯದಲ್ಲಿ ಮುಂದುವರೆಯುವ ಸೂಚನೆ ನೀಡಿದರು.
ಇಡೀ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಜನರು ನನ್ನನ್ನು ಗೆಲ್ಲಿಸಿದ್ದಾರೆ ಎಂದರೆ ಇದಕ್ಕೆ ಒಂದು ಜಾತಿಯ ಜನ ಕಾರಣರಲ್ಲ. ಮಧುಗಿರಿ ಕ್ಷೇತ್ರದ ಎಲ್ಲಾ ವರ್ಗದ ಜನರು ಕಾರಣ ಎಂದರು. ಮನುಷ್ಯನ ಜೀವನದಲ್ಲಿ ಹುಟ್ಟು ಆಕಸ್ಮಿಕ, ಸಾವು ಖಚಿತ, ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ. ನಾವು ಮಾಡುವ ಪುಣ್ಯದ ಕೆಲಸಗಳು ಸಾವಿನ ನಂತರವೂ ನಮ್ಮನ್ನು ಬದುಕಿಸುತ್ತವೆ. ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗದಿದ್ದರೆ ನಮಗೂ, ಪ್ರಾಣಿಗಳಿಗೂ ವ್ಯತ್ಯಾಸವಿಲ್ಲ. ಕಳೆದ 50 ವರ್ಷಗಳಲ್ಲಿ ನಾನು ನೇರ, ನಿಷ್ಠೂರ ನಡೆಯಿಂದಲೇ, ಅನ್ಯಾಯವನ್ನು ಖಂಡಿಸುತ್ತಾ ಬಂದವನು. ವಿದ್ಯಾರ್ಥಿ ದಿಸೆಯಿಂದಲೇ ಆ ಮನೋಸ್ಥಿತಿಯನ್ನು ರೂಢಿಸಿಕೊಂಡೆ, ಒಬ್ಬನೇ ಕುಳಿತು ಮೇಲುಕು ಹಾಕಿದರೆ ಆಶ್ಚರ್ಯವೆನಿಸುತ್ತದೆ ಎಂದು ಹೇಳಿದರು.
ರಾಜನಹಳ್ಳಿಯ ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯನವರ ಸಚಿವ ಸಂಪುಟದ ಧೀಮಂತ ಸಚಿವರು ಎಂದರು.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿಯ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯಸ್ವಾಮೀಜಿ, ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಸೇರಿದಂತೆ ಹಿಂದುಳಿದ ವರ್ಗಗಳ ಸ್ವಾಮಿಗಳು ಪಾದಪೂಜೆಯಲ್ಲಿ ಪಾಲ್ಗೊಂಡು ಕೆ.ಎನ್.ರಾಜಣ್ಣ ಅವರ ಪತ್ನಿ ಶಾಂತಲ ರಾಜಣ್ಣ ಸೇರಿದಂತೆ ಕುಟುಂಬದ ಎಲ್ಲರಿಗೂ ಆಶೀರ್ವಾದ ನೀಡಿದರು. ಕೆ.ಎನ್.ಆರ್. ಪತ್ನಿ ಶಾಂತಲ ರಾಜಣ್ಣ, ಪುತ್ರ ಎಂ.ಎಲ್.ಸಿ.ಆರ್.ರಾಜೇAದ್ರ, ಪುತ್ರಿ ರಶ್ಮಿ, ರವೀಂದ್ರ, ಸಿಂಗದಹಳ್ಳಿ ರಾಜಕುಮಾರ್, ಪಿ.ಮೂರ್ತಿ, ಗಂಗಣ್ಣ, ಕಲ್ಲಹಳ್ಳಿ ದೇವರಾಜು, ಟಿ.ಪಿ.ಮಂಜುನಾಥ್ ಇದ್ದರು.


