ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ರಂಗಭೂಮಿ ಕಲಾವಿದರನ್ನು ಸಂಘಟಿಸುವಲ್ಲಿ ಅಪಾರ ಶ್ರಮವಹಿಸಿದ್ದ ಹಿರಿಯ ಪತ್ರಕರ್ತ, ಲೇಖಕ ಗುಡಿಹಳ್ಳಿ ನಾಗರಾಜ್(66) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಮಕ್ಕಳು ಹಾಗೂ ಸ್ನೇಹಬಗಳವನ್ನು ಅಗಲಿದ್ದಾರೆ.
ವಿದ್ಯಾಭ್ಯಾಸ ಮುಗಿಸಿದ ಬಳಿಕ ಕೆಲ ಕಾಲ ಕಾಲೇಜು ಉಪನ್ಯಾಸಕರಾಗಿ ಕೆಲಸ ಮಾಡಿದರು. ಬಳಿಕ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಕೊನೆಯವರೆಗೂ ಸೇವೆ ಸಲ್ಲಿಸಿ ನಿವೃತ್ತಿಯಾದರು. ರಂಗಭೂಮಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ರಾಜ್ಯಾದ್ಯಂತ ತಿರುಗಿ ರಂಗಭೂಮಿಗೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದರು.
“ಗೆಳೆಯ ಗುಡಿಹಳ್ಳಿ ನಾಗರಾಜ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಬೆಳಿಗ್ಗೆಯಷ್ಟೇ ಅವರು ಪ್ರಕಟಿಸುತ್ತಿದ್ದ ರಂಗನೇಪಥ್ಯ ಮಾಸಪತ್ರಿಕೆ ಬಂದಿತ್ತು. ಪ್ರಜಾವಾಣಿಯಲ್ಲಿ ಬಹು ವರ್ಷ ಸಹೋದ್ಯೋಗಿ ಆಗಿದ್ದ ಸಹೃದಯಿ ಮಿತ್ರ. ಚಿತ್ರದುರ್ಗ ಜಿಲ್ಲಾ ವರದಿಗಾರರೂ ಆಗಿದ್ದ ಅವರು ಪ್ರಜಾವಾಣಿ ಮತ್ತು ಸುಧಾ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ವೃತ್ತಿ ರಂಗಭೂಮಿಯ ಆಕರ ವಿಜ್ಞಾನಿಯಂತೆ ಮಾಹಿತಿ ಕಣಜವಾಗಿದ್ದ ಅವರ ಅಕಾಲಿಕ ನಿಧನ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ನಿಜವಾದ ನಷ್ಟ. ಅವರಿಗೆ ಕಂಬನಿಯ ವಿದಾಯ” ಎಂದು ಹಿರಿಯ ಪತ್ರಕರ್ತ ಲಕ್ಷ್ಮಣ್ ಕೊಡಸೆ ಸ್ಮರಿಸಿದ್ದಾರೆ.
ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ರಾಜಶೇಖರಮೂರ್ತಿ “ಎಸ್.ಎಫ್.ಐ. ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಪ್ರಜಾವಾಣಿಯಲ್ಲಿದ್ದ ಗುಡಿಹಳ್ಳಿ ನಾಗರಾಜ್ ಅವರನ್ನ ಆಗಾಗ ಭೇಟಿ ಮಾಡುತ್ತಿದ್ದೆ. ಚರ್ಚೆ ಮಾಡುವ ಸಂದರ್ಭದಲೆಲ್ಲಾ ಅವರು ಪ್ರಜಾಸತ್ತಾತ್ಮಕ ಚಳವಳಿ ಬೆಳೆಯದೆ ಶೋಷಿತರಿಗೆ ಮುಕ್ತಿಯಿಲ್ಲ. ಹೀಗಾಗಿ ಪ್ರಜಾಸತ್ತಾತ್ಮಕ ಚಳವಳಿ ಬೆಳೆಯಲು ಹೆಚ್ಚು ಹೆಚ್ಚು ವಿದ್ಯಾರ್ಥಿ-ಯುವಜನರನ್ನು ತೊಡಗಿಸಬೇಕೆಂದು ಮಾರ್ಗದರ್ಶನ ನೀಡುತ್ತಿದ್ದರು. ಅವರ ಅಗಲಿಕೆ ಅಪಾರ ನೋವುಂಟು ಮಾಡಿದೆ” ಎಂದು ಕಂಬನಿ ಮಿಡಿದಿದ್ದಾರೆ.
ತುಮಕೂರು ಜಿಲ್ಲೆಗೂ ಹಲವು ಬಾರಿ ಬಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ರಂಗಕಲಾವಿದರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪತ್ರಿಕೆಯಲ್ಲಿ ಬರೆದು ಬೆಳಕು ಚೆಲ್ಲಿದ್ದಾರೆ. ರಂಗಭೂಮಿಯ ಕುರಿತು ನೂರಾರು ಲೇಖನಗಳನ್ನು ಬರೆದು ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ.