ಕಾಂಗ್ರೆಸ್ ಪಕ್ಷ ಗಾಂಧೀಜಿಯ ಸತ್ಯ, ಶಾಂತಿ ಮತ್ತು ಅಹಿಂಸೆಯ ತತ್ವದ ಮೇಲೆ ನಡೆಯುತ್ತಿದೆ. ಎಲ್ಲ ವರ್ಗದ ಜನರಿಗೂ ಅವಕಾಶಗಳನ್ನು ಕಲ್ಪಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ತಿಳಿಸಿದ್ದಾರೆ.
ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಹುತಾತ್ಮರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿಜೀ ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಷ್ಟೇ ಅಲ್ಲ. ಈ ದೇಶದಲ್ಲಿ ನಡೆಯುತಿದ್ದ ಅನಿಷ್ಠ ಪದ್ದತಿಗಳ ವಿರುದ್ದವೂ ಹೋರಾಟ ನಡೆಸಿದ್ದರು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯ ನಂತರವೂ ದೇಶದ ಸಮಗ್ರ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸಿದ ಪರಿಣಾಮ ಶಾಲಾ, ಕಾಲೇಜು, ಆಸ್ಪತ್ರೆ, ರಸ್ತೆ, ವಿಮಾನ ನಿಲ್ದಾಣಗಳು, ಅಣೆಕಟ್ಟು ಗಳು ನಿರ್ಮಾಣಗೊಂಡು ದೇಶದ ಜನರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಯಿತು. ಇದನ್ನು ತಿಳಿಯದ ಕೆಲವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಎನು ಎಂದು ಪ್ರಶ್ನೆ ಮಾಡುತ್ತಾರೆ. ಇತಿಹಾಸವೇ ಗೊತ್ತಿಲ್ಲದವರಿಂದ ಇತಿಹಾಸ ನಿರ್ಮಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನನ್ನ ಜೀವನವೇ ನನ್ನ ಸಂದೇಶ ಎಂದ ಮಹಾತ್ಮಗಾಂಧಿಯ ತತ್ವಗಳನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಪ್ರಪಂಚದ ಶೇ. 90 ರಷ್ಟು ರಾಷ್ಟ್ರಗಳು ಗಾಂಧಿಜೀಯ ಸಂಸ್ಮರಣೆ ಮಾಡುತ್ತಿವೆ. ಗಾಂಧಿಜೀ ಹುತಾತ್ಮರಾದ ದಿನ ವಿಶ್ವದ 144 ದೇಶಗಳು ಅವರ ದೇಶದ ಬಾವುಟಗಳನ್ನು ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಿದ್ದರು. ಇಂದು ಮಹಾತ್ಮಗಾಂಧಿ ಎನ್ನುವ ಹೆಸರಿಗೆ ಇದ್ದ ಶಕ್ತಿ. ಮಹಾತ್ಮಗಾಂಧಿ ಅವರ ರೀತಿಯಲ್ಲಿಯೇ ಜವಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸರದಾರ್ ವಲ್ಲಭಾ ಬಾಯಿ ಪಟೇಲ್ ಸೇರಿದಂತೆ ಅನೇಕರು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನು ನಾವು ಸ್ಮರಿಸಬೇಕಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಗಾಂಧೀಜಿಯವರನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಗಾಂಧಿ ಆಧ್ಯಯನ ಕೇಂದ್ರ ತೆರೆಯಲು ಮುಂದಾದರೆ ಗಾಂಧಿ ಪ್ರತಿಷ್ಠಾನದಿಂದ ಎಲ್ಲ ರೀತಿಯ ನೆರವು ದೊರೆಯಲಿದೆ. ಈ ನಿಟ್ಟಿನಲ್ಲಿ ಸಿಂಡಿಕೇಟ್ ಸದಸ್ಯ ಶಿವಣ್ಣ ಅವರು ಪ್ರಯತ್ನಿಸಬೇಕು ಎಂದರು.
ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಶಿವಣ್ಣ ಮಾತನಾಡಿ, ಗಾಂಧೀಜಿ ಸೇರಿದಂತೆ ಹುತಾತ್ಮರಾದ ಕಾಂಗ್ರೆಸ್ ನಾಯಕರುಗಳನ್ನು ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿವಿಯ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಗಾಂಧಿ ಆಧ್ಯಯನ ಕೇಂದ್ರ ಸ್ಥಾಪಿಸಲು ಪ್ರಾಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಮುಖಂಡರಾದ ಷಣ್ಮುಗಪ್ಪ, ಅರಕೆರೆ ಪಂಚಣ್ಣ, ರೇವಣ್ಣ ಸಿದ್ದಯ್ಯ, ಸುಜಾತ, ಭಾಗ್ಯ, ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್, ಕೆಂಪರಾಜು, ಅನಿಲ್, ಲೋಕೇಶ್ ಸ್ವಾಮಿ, ಕಾರ್ಮಿಕ ವಿಭಾಗದ ವಿ.ಎಸ್.ಸೈಯದ್ ದಾದಾಪೀರ, ನದೀಂ, ಶಿವಾಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.