ರಂಗಭೂಮಿ ದೇಹ ಮತ್ತು ಮನಸ್ಸನ್ನು ಏಕಕಾಲಕ್ಕೆ ಬೆಳೆವಣಿಗೆಗೊಳಿಸುವ ಪ್ರಕ್ರಿಯೆ ಆಗಿದೆ. ಇಂದಿನ ದಿನಮಾನಗಳಲ್ಲಿ ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆ ಪ್ರಮುಖವಾಗಿ ಆಗಬೇಕಾದ ವಿಷಯವಾಗಿದೆ ಎಂದು ಲೋಕಚರಿತ ರಂಗಕೇಂದ್ರ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಹೇಳಿದರು
ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ‘ತಿಂಡಿಗೆ ಬಂದ ತುಂಡೆರಾಯ’ ನಾಟಕ ಪ್ರದರ್ಶನದ ಮುಂಚೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ರಂಗಭೂಮಿಯ ಬೀಜ ಬಿತ್ತುವುದು ಎಂದರೆ ಅದು ವಿಶ್ವಮಾನವತೆಯನ್ನು ನೆಲೆಗೊಳಿಸಿದ ಹಾಗೆಯೇ ಆಗುತ್ತದೆ. ಕರ್ನಾಟಕದ ಗಡಿಭಾಗಗಳಲ್ಲೂ ಸಹ ಕನ್ನಡ ರಂಗಭೂಮಿ ಬೆಳೆದಷ್ಟು ಕನ್ನಡ ಪ್ರಜ್ವಲಿಸುತ್ತದೆ. ಸರ್ಕಾರಗಳು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ ಎಂದರು.
ತುಮಕೂರು ರಂಗಭೂಮಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ. ಮಧುಗಿರಿ, ಪಾವಗಡ ಗಡಿ ತಾಲ್ಲೂಕುಗಳಿಗೆ ರಂಗಭೂಮಿ ವಿಚಾರದಲ್ಲಿ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದರು.
ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಅವರ ” The resistible rise of Arthuro Ui ” ನಾಟಕವನ್ನು ಆಧರಿಸಿದ ‘ತಿಂಡಿಗೆ ಬಂದ ತುಂಡೆರಾಯ’ ನಾಟಕ ಯುವರಂಗಕರ್ಮಿ ಶಕೀಲ್ ಅಹಮದ್ ನಿರ್ದೇಶನದಲ್ಲಿ ಎರಡು ಗಂಟೆಗಳ ಕಾಲ ಪ್ರದರ್ಶನವಾಯಿತು. ಕಲಾವಿದರ ಅಭಿನಯಕ್ಕೆ ಪ್ರೇಕರಿಂದ ಮೆಚ್ಚುಗೆ ವ್ಯಕ್ತವಾಯಿತು.’
ಕಾರ್ಯಕ್ರಮದಲ್ಲಿ ಡಿಡಿಪಿಯು ಬಾಲಗುರುಮೂರ್ತಿ, ಝನ್ ಟೀಮ್ ನ ಉಗಮ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಮುಖಂಡ ವಿರುಪಾಕ್ಷ ಡ್ಯಾಗೇರಹಳ್ಳಿ, ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕುಮಾರ್, ಸಮ್ಮತ ಥೇಟರ್ ನ ಸುನೀಲ, ಚೇತನ, ಜಮಾಜೆ ಇಸ್ಲಾಮ್ ಹಿಂದ್ ನ ಅಸಾದುಲ್ಲ, ಡಾ. ಅರುಂಧತಿ ಇದ್ದರು.