ಸುಪ್ರಿಂಕೋರ್ಟಿನ ಆದೇಶದಂತೆ ಕೂಡಲೇ ಒಳಮೀಸಲಾತಿ ಜಾರಿಗೆ ಸರಕಾರ ಮುಂದಾಗಬೇಕು. ನ್ಯಾ.ಸದಾಶಿವ ಆಯೋಗದ ಶಿಫಾರಸನ್ನು ಯಾಥಾವತ್ತು ಜಾರಿಗೆ ತರಲು ನ್ಯಾ.ನಾಗಮೋಹನ್ ದಾಸ್ ಸಮಿತಿಗೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಪಿ ರಾಜ್ಯ ಉಪಾಧ್ಯಕ್ಷ ಹಾಗೂ ಒಕ್ಕೂಟದ ರಾಜ್ಯ ಸಂಚಾಲಕ ಗುರುಮೂರ್ತಿ, ನ್ಯಾ.ಸದಾಶಿವ ಆಯೋಗದ ವರದಿಯನ್ನು ಪರಿಗಣಿಸಿ, ಹೆಚ್ಚಳವಾಗಿರುವ ಶೇ2ರ ಮೀಸಲಾತಿಯನ್ನು ಒಳಗೊಂಡಂತೆ ಶೇ17ರ ಮೀಸಲಾತಿಯನ್ನು 101 ಜಾತಿಗೆ ಅನುಗುಣವಾಗಿ ಎಬಿಸಿಡಿ ವರ್ಗಿಕರಣ ಮಾಡಿ ಹಂಚಿಕೆ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಸರಕಾರ ಕೊಟ್ಟ ಮಾತಿನಂತೆ ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಬ್ಯಾಕಲಾಗ್ ಹುದ್ದೆಗಳನ್ನು ತುಂಬಬಾರದು. ಹಾಗೆಯೇ ಅಲೆಮಾರಿ ಪಟ್ಟಿಯಲ್ಲಿರುವ 49 ಸಮುದಾಯಗಳಿಗೆ ಶೇ1 ಮೀಸಲಾತಿಯನ್ನು ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅನಗತ್ಯ ವಿಳಂಬ ಮಾಡದ ನಿಗದಿತ ಅವಧಿಯೊಳಗೆ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಒಳಮೀಸಲಾತಿಗಾಗಿ ಸುಮಾರು 3 ದಶಕಗಳ ಹೋರಾಟವನ್ನು ಇದುವರೆಗೂ ಆಳ್ವಿಕೆ ಮಾಡಿದ ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸಿದ್ದು, ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಸರಕಾರ ನಡೆದುಕೊಳ್ಳುತ್ತಿಲ್ಲ. 2006ರಲ್ಲಿ ನೇಮಕವಾಗಿ ನ್ಯಾ.ಎ.ಜೆ.ಸದಾಶಿವ ಆಯೋಗವು ಸುಮಾರು 7 ವರ್ಷಗಳ ಕಾಲ ಪ್ರತಿ ಮನೆ ಮನೆಗೆ ತೆರಳಿ ಮಾಹಿತಿ ಕಲೆಹಾಕಿದ್ದು, ಸದರಿ ಅಂಕಿ ಅಂಶಗಳನ್ನೇ ಬಳಸಿಕೊಳ್ಳಲು ಸರಕಾರ ನ್ಯಾ.ನಾಗಮೋಹನ್ ದಾಸ್ ಸಮಿತಿ ಶಿಫಾರಸ್ಸು ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ದಂಡು ಸಂಘಟನೆಯ ಜಿಲ್ಲಾಧ್ಯಕ್ಷ ಕುಮಾರ್, ಮುಖಂಡರಾದ ಗಂಗಣ್ಣ, ವೀರಕ್ಯಾತಯ್ಯ, ಜಿ.ಟಿ.ಯುವರಾಜು, ಎನ್.ಕೇಶವ್, ತಿಪ್ಪೇಸ್ವಾಮಿ, ಭರತ್ ಬೆಲ್ಲದಮಡು, ಗಿರೀಶ್, ಕೃಷ್ಣಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.