ಫುಡ್ ಫ್ಯಾಕ್ಟರಿಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಗಡಿರಸ್ತೆಯಲ್ಲಿ ಸಂಭವಿಸಿದೆ.ದುರಂತದಲ್ಲಿ ಮೂವರು ತೀವ್ರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬಿಹಾರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ಎಂ.ಎಂ ಫುಡ್ ಫ್ಯಾಕ್ಟರಿಯಲ್ಲಿ ಐವರು ಕೆಲಸ ನಿರ್ವಹಿಸುತ್ತಿದ್ದರು. ಆಗಸ್ಟ್ 23ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಾರೀ ಸ್ಪೋಟ ಕೇಳಿಸಿದೆ. ಕೂಡಲೇ ಅಪಕ್ಕಪಕ್ಕದ ನಿವಾಸಿಗಳು ಹೊರಬಂದು ನೋಡಿದಾಗ ಪಕ್ಕದ ಫುಡ್ ಫ್ಯಾಕ್ಟರಿಯಲ್ಲಿ ಬೆಂಕಿಯ ಜ್ಞಾಲೆಯೊಂದಿಗೆ ದಟ್ಟವಾದ ಹೊಗೆ ಬರುತ್ತಿದ್ದುದು ಕಂಡುಬಂದಿದೆ.
ಬಾಯ್ಲರ್ ಸ್ಫೋಟದಲ್ಲಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಸೌರಭ್ ಮತ್ತು ಮನೀಷ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದರು. ಘಟನೆಯಲ್ಲಿ ಶಾಂತಿ, ಸಬ್ಬೀರ್, ಧನಲಕ್ಷ್ಮೀ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಫುಡ್ ಫ್ಯಾಕ್ಟರಿ ಟ್ಯಾಗೋರ್ ಶಾಲೆಯ ಗೋಡೌನ್ ನಲ್ಲಿ ನಡೆಯುತ್ತಿತ್ತು. ಇದಕ್ಕೆ ಅನುಮತಿ ಇರಲಿಲ್ಲ. 4 ತಿಂಗಳ ಹಿಂದೆಯೇ ಅಕ್ರಮ ಫುಡ್ ಫ್ಯಾಕ್ಟರಿ ಬಗ್ಗೆ ದೂರು ನೀಡಿದ್ದರೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಕಾರ್ಖಾನೆಗಳಲ್ಲಿ ಬಾಯ್ಲರ್ ಸ್ಫೋಟಗಳು ನಡೆಯುತ್ತಲೇ ಇವೆ. ಜೀವಗಳು ಬಲಿಯಾಗುತ್ತಲೇ ಇವೆ. ಆದರೂ ಸರ್ಕಾರ ಇದರ ಬಗ್ಗೆ ಕಠಿಣ ಕಾನೂನುಗಳನ್ನು ರೂಪಿಸಿದಂತೆ ಕಾಣುತ್ತಿಲ್ಲ. ಇಬ್ಬರು ಅಮಾಯಕ ಕೂಲಿಕಾರ್ಮಿಕರು ಬಲಿಯಾಗಿರುವುದಕ್ಕೆ ಹೊಣೆ ಯಾರು ಎಂಬುದು ನಮ್ಮ ಮುಂದಿರುವ ಪ್ರಶ್ನೆ.