ಮನುಸ್ಮೃತಿಯ ಸಂಕೋಲೆಯ ಆಚೆಗೆ ಸಮಾಜದ ಒಳಿತಿಗಾಗಿ ದುಡಿದ ಸಾವಿತ್ರಿ ಬಾಯಿ ಫುಲೆ ಅವರ ಚಿಂತನೆ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಸಾಕಷ್ಟು ಕಷ್ಟಗಳ ನಡುವೆ ಅನಕ್ಷರಸ್ಥ ಮಹಿಳೆಯರಿಗಾಗಿ ಶಾಲೆಯನ್ನು ನಡೆಸಿದರು. ಸಮಾಜದ ಕಿರುಕುಳ ಎದುರಿಸಿ ಶಾಲೆಯನ್ನು ನಡೆಸುವ ಮೂಲಕ ಶೋಷಿತ ಸಮುದಾಯಕ್ಕೆ ಅಕ್ಷರವನ್ನು ಕಲಿಸಿದ ಮಹಾನ್ ಚೇತನ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಜನ್ಮಾದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಮಹಿಳೆಯರು ಎಲ್ಲ ಸಮಾಜದಲ್ಲಿಯೂ ಶೋಷಿತರೇ, ಬ್ರಾಹ್ಮಣ ಸಮುದಾಯದಲ್ಲಿ ಮಹಿಳೆಯರ ಶೋಷಣೆ ಶೋಚನೀಯವಾಗಿದೆ. ಶೂದ್ರ ಸಮಾಜದ ಮಹಿಳೆಯರ ಸ್ಥಿತಿ ಇದ್ದಿದ್ದರಲ್ಲಿ ಉತ್ತಮವಾಗಿದೆ. ದುಡಿದು ತಿನ್ನುವುದಕ್ಕಾಗಿ ಮನೆಯಿಂದ ಹೊರ ಬರುವಂತ ಪರಿಸ್ಥಿತಿ ಇತ್ತು. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚಿದೆ ಎಂದರು.
ಇಂದು ಮೂಢ ನಂಬಿಕೆ, ಅಂಧಶ್ರದ್ಧೆ ಪಾಲಿಸುವವರಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಿದೆ. ಅದರಲ್ಲಿ ಸರ್ಕಾರಿ ನೌಕರರು ಸೇರಿದ್ದಾರೆ, ಅಂಬೇಡ್ಕರ್ ಅವರು ಹೇಳಿದ ಉಪದೇಶಗಳನ್ನು ಸ್ಲೋಗನ್ ಆಗಿ ಇಟ್ಟುಕೊಂಡಿದ್ದೇವೆಯೇ ಹೊರತು ಪಾಲಿಸುತ್ತಿಲ್ಲ, ಶಿಕ್ಷಣದಿಂದ ಅಂಧಶ್ರದ್ಧೆ, ಬಡತನ ಹೋಗುತ್ತದೆ ಎನ್ನುವ ಅಭಿಪ್ರಾಯ ಈಗ ಬದಲಾಗಿದೆ ಎಂದರು.
ಸಾಧಕ ಶಿಕ್ಷಕಿಯರಿಗೆ ಸನ್ಮಾನಿಸಿ ಅವರು ಮಾತನಾಡಿದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಾವಿತ್ರಿಬಾಯಿಫುಲೆ ಅವರನ್ನು ಬೀದಿಯಲ್ಲಿ ಅವಮಾನಿಸಿದ ಮಂದಿಯೇ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಾಗ ವಿರೋಧಿಸಿದರು. ಸಮಾಜವನ್ನು ಮೌಢ್ಯ ಹಾಗೂ ಅಂಧಶ್ರದ್ಧೆಯಲ್ಲಿಡಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ವಿವಿ ಕುಲಸಚಿವೆ ನಾಹೀದಾ ಜಮ್ ಜಮ್ ಮಾತನಾಡಿ, ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಬೇಕಿದೆ, ಗ್ರಾಮೀಣರಲ್ಲಿ ಇದರ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಿದೆ. ಮಹಿಳೆಯರು ಸದೃಢವಾಗುವುದಕ್ಕೆ ಅಗತ್ಯವಾಗಿ ಆರ್ಥಿಕ ಸಬಲತೆ ಸಾಧಿಸಬೇಕಿದೆ. ಮನೆಯಲ್ಲಿ ದುಡಿಯುವ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಶಂಕರ್, ವೈ.ಕೆ.ಬಾಲಕೃಷ್ಣಪ್ಪ, ವೈ.ಟಿ.ತಿಮ್ಮಯ್ಯ, ವಿಜಯ್ ಕುಮಾರ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಡಾ.ಹೆಚ್.ನಾಗರಾಜು, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಕುಮಾರ್, ಸಿಎಒ ನರಸಿಂಹಮೂರ್ತಿ, ಗೋಪಿನಾಥ್, ಆರ್ ಎಫ್ ಒ ಸುರೇಶ್, ಕೋಟೆ ಕಲ್ಲಯ್ಯ, ಹನುಮಂತರಾಜು ಇದ್ದರು.