ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತನೆಯುಳ್ಳ ಲೇಖಕ ಹಾಗೂ ಹಿರಿಯ ಚಿಂತಕ ಮುಜಾಪ್ಪರ್ ಅಸ್ಸಾದಿ ನಿಧನರಾಗಿದ್ದಾರೆ. ಹರಿತವಾದ ಲೇಖನಗಳಿಂದಲೇ ಹೆಸರಾಗಿದ್ದರು.
ಮುಖ್ಯಮಂತ್ರಿ ಸಂತಾಪ
ನಮ್ಮೆಲ್ಲರಿಗೆ ಪ್ರೀತಿಪಾತ್ರರಾಗಿದ್ದ ಹಿರಿಯ ವಿದ್ವಾಂಸ ಮತ್ತು ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಪ್ರೊ.ಅಸ್ಸಾದಿ ಕೇವಲ ಒಬ್ಬ ಪ್ರಾಧ್ಯಾಪಕ ಆಗಿರಲಿಲ್ಲ. ನಾಡಿನ ಜನಪರ ಹೋರಾಟವನ್ನು ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು. ಅವರ ಅಗಲಿಕೆಯಿಂದ ನಾಡು ಬಡವಾಗಿದೆ, ಅವರ ಅಗಲಿಕೆಯಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ ಎಂದಿದ್ದಾರೆ.
ನಿರಂತರವಾದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿಯೂ ತಮ್ಮ ವಿದ್ವತ್ಪೂರ್ಣ ಬರವಣಿಗೆ ಮತ್ತು ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದ ಪ್ರೊ.ಅಸ್ಸಾದಿ ಅವರು ಕನ್ನಡದ ಹೆಮ್ಮೆಯ ಪುತ್ರ ಎಂದು ಹೇಳಿದ್ದಾರೆ.
ವರ್ಷಗಳಿಂದ ನನ್ನ ಹಿತೈಷಿಯಾಗಿ ರಾಜಕೀಯವಾಗಿ ಸದಾ ನನ್ನ ಏಳಿಗೆಯನ್ನು ಹಾರೈಸುತ್ತಿದ್ದ ಪ್ರೊ.ಅಸ್ಸಾದಿ ಅವರ ಸಾವು ವೈಯಕ್ತಿಕವಾಗಿಯೂ ನನ್ನ ಪಾಲಿಗೆ ದೊಡ್ಡ ನಷ್ಟ. ಪ್ರೊ.ಅಸ್ಸಾದಿ ಅವರನ್ನು ಕಳೆದುಕೊಂಡ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಬಸವರಾಜು ಸಂತಾಪ
ಹಿರಿಯ ಗೆಳೆಯರಾದ ಮುಜಾಪ್ಫರ್ ಅಸ್ಸಾದಿ ಅವರು ಈ ಸಲ ಧಾರವಾಡ ಕರ್ನಾಟಕ ವಿ ವಿಗೆ ಕುಲಪತಿ ಆಗಿ ಬರ್ತಾರ ಅಂಥ ನಿರೀಕ್ಷೆ ಇಟ್ಟುಕೊಂಡಿದ್ದೆ. ಬೆಳಿಗ್ಗೆ ಅವರು ಹೋಗಿ ಬಿಟ್ಟಿರುವ ಸಂಕಟದ ಸುದ್ದಿ ಬಂದೆರಗಿದೆ. ತುಂಬ ಒಡನಾಡಿದವರು. ಅವರೊಂದು ಪುಸ್ತಕವನ್ನು ಲಡಾಯಿ ಪ್ರಕಾಶನದಿಂದ ಪ್ರಕಟ ಮಾಡಿದ್ದೇವು. ಮೇ ಸಾಹಿತ್ಯ ಮೇಳಕ್ಕೆ ಬಂದು ಹೋಗಿದ್ದರು ಎಂದು ಬಸೂ ಸ್ಮರಿಸಿದ್ದಾರೆ.
ಕ್ಲಾಸ್ ರೂಮಿನಲ್ಲಿ ನಮ್ಮಂಥ ವಿದ್ಯಾರ್ಥಿಗಳು ಇನ್ನೂ ಕುಳಿತಿರುವಾಗ ಹೀಗೆ ಅವಸರದಿಂದ ನೀವು ಎದ್ದು ನಡೆಯಬಾರದಿತ್ತು.
ಬೆಳಬೆಳಿಗ್ಗೆ ಚಳವಳಿಯ ಸಂಗಾತಿ ಕಾಂ ಬಯ್ಯಾರಡ್ಡಿ ನಮ್ಮಗಲಿದ ಆಘಾತದ ಸುದ್ದಿ ಕೇಳಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಳಿಯ ಗೊಜನೂರ ಗ್ರಾಮದಲ್ಲಿ ರೈತ ಚಳವಳಿಗೆ ಸಂಬಂಧಿಸಿದ ಒಂದು ದಿನದ ವಿಚಾರ ಸಂಕಿರಣ ಇಟ್ಟುಕೊಂಡಿದ್ದೇವು. ಆಗವರು ಬಂದಿದ್ದರು. ಅಲ್ಲಿಂದ ಸುರುವಾದ ಚಳವಳಿಯ ಒಡನಾಟ ಮತ್ತೆ ಮತ್ತೆ ನಮ್ಮನ್ನು ಒಂದುಗೂಡುವಂತೆ ಮಾಡುತ್ತಿತ್ತು ಎಂದು ಹೇಳಿದ್ದಾರೆ.
ಅಕಾಲಿಕವಾಗಿ ಎದ್ದು ಹೋಗಿರುವ ಈ ಇಬ್ಬರು ಹಿರಿಯ ಗೆಳೆಯರಿಗೆ ಅವರ ತಾತ್ವಿಕ ಬದ್ದತೆ, ಚಳವಳಿಯ ದಿಟ್ಟತನ, ಜೀವನ ಪ್ರೀತಿ ಗೌರವಿಸುತ್ತ ಮೇ ಸಾಹಿತ್ಯ ಮೇಳ ಬಳಗವು ಅಂತಿಮ ನಮನಗಳು ಅರ್ಪಿಸುತ್ತದೆ


