ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರದ ಕೊರತೆಯ ಕಾರಣ ನೀಡಿ ಉಪನ್ಯಾಸಕರನ್ನು ಕೆಲಸದಿಂದ ವಜಾಗೊಳಿಸುವಂತೆ, ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದ್ದು ಈ ಆದೇಶವನ್ನು ಹಿಂಪಡೆಯುವಂತೆ ಎಐಡಿಎಸ್ ಒ ಒತ್ತಾಯಿಸಿದೆ.
ವಿಷಯವಾರು 40 ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಉಪನ್ಯಾಸಕರನ್ನು ವಜಾಗೊಳಿಸಬೇಕಾಗಿ ಆದೇಶವು ತಿಳಿಸುತ್ತದೆ. ಇದು ಖಂಡನೀಐ ಎಂದು ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಲಕ್ಕಪ್ಪ ಹೇಳಿದ್ದಾರೆ.
ಕಳೆದ ಆರು ತಿಂಗಳಿನಿಂದ ಈ ಉಪನ್ಯಾಸಕರ ಸಂಬಳವನ್ನು ಕೂಡ ಸರ್ಕಾರವು ತಡೆಹಿಡಿದಿದೆ. ಕರ್ನಾಟಕ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಈ ಶಿಕ್ಷಣ ವಿರೋಧಿ ಮತ್ತು ಹೃದಯಹೀನ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಸರ್ಕಾರವು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆ ಹೊರತು, ಉಪನ್ಯಾಸಕರನ್ನು ವಜಾ ಮಾಡುವುದಲ್ಲ. ರಾಜ್ಯದ 821 ಅನುದಾನಿತ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಕೂಡ ಕೆಲವು ವಿಷಯಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣ ನೀಡಿ ಈಗ ಉಪನ್ಯಾಸಕರನ್ನು ವಜಾಗೊಳಿಸಿದರೆ, ಉಪನ್ಯಾಸಕರ ಕೊರತೆಯಿಂದ ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಕಡಿತಗೆದುಕೊಳ್ಳುತ್ತದೆ ಎಂದಿದ್ದಾರೆ.
ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆಯೇ, ಅಂತಿಮವಾಗಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳನ್ನು ಮುಚ್ಚುವ ಹುನ್ನಾರ ಇದಾಗಿದೆ. ಕೂಡಲೇ ಉಪನ್ಯಾಸಕರನ್ನು ವಜಾ ಮಾಡಿರುವ ಆದೇಶವನ್ನು ಸರ್ಕಾರವು ಹಿಂಪಡೆಯಬೇಕು ಮತ್ತು ಅವಶ್ಯಕ ಸೌಕರ್ಯಗಳನ್ನು ನೀಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸರ್ಕಾರವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.