ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯವನ್ನು ಎಸಗಿದ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಭೀಮ್ ಆರ್ಮಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅಯ್ಯನಪಾಳ್ಯ ಶ್ರೀನಿವಾಸಮೂರ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಮಹಿಳೆಯೊಬ್ಬರು ತಮ್ಮ ಜಮೀನು ವಿಚಾರವಾಗಿ ದೂರು ನೀಡಲು ಮಧುಗಿರಿ ಡಿ.ವೈ.ಎಸ್.ಪಿ. ಕಛೇರಿಗೆ ಆಗಮಿಸಿದ್ದಂತಹ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ರಾಮಚಂದ್ರಪ್ಪನವರು ಲೈಂಗಿಕ ದೌರ್ಜನ್ಯವನ್ನು ಮಾಡಿದ್ದಾರೆ ಎಂದು ಹೇಳಲಾಗಿ ಸುದ್ಧಿ ಪ್ರಸಾರವಾಗಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮತ್ತು ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ಬೇಸರ ಮೂಡಿಸಿರುವುದಲ್ಲದೇ, ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಳೆದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮಚಂದ್ರಪ್ಪನವರು ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಾದ ಡಿ.ವೈ.ಎಸ್.ಪಿ. ಸ್ಥಾನದಲ್ಲಿದ್ದಾರೆ ತಮ್ಮ ಸನ್ನಿಧಾನಕ್ಕೆ ದೂರದ ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದ ಮಹಿಳೆಯನ್ನು ತನ್ನ ಕಚೇರಿಯಲ್ಲಿನ ಏಕಾಂತ ಗೃಹ ಅಥವಾ ಶೌಚಾಲಯದಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ. ಹೀಗಾಗಿ ಡಿವೈಎಸ್ಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಿವೈಎಸ್ ಪಿ ಅಮಾನತು
ತಮ್ಮ ಕಚೇರಿಗೆ ದೂರು ನೀಡಲು ಬಂದಿದ್ದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ತುಮಕೂರು ಜಿಲ್ಲೆಯ ಮಧುಗಿರಿ ಡಿವೈಎಸ್ಪಿ ಎ. ರಾಮಚಂದ್ರಪ್ಪ ಅವರನ್ನು ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅಮಾನತ್ತು ಮಾಡಿದ್ದಾರೆ.

ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನವರು ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದ ಮಹಿಳೆಯನ್ನು ತನ್ನ ಕಚೇರಿಯಲ್ಲೇ ಏಕಾಂತ ಗೃಹ ಅಥವಾ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅನೈತಿಕ ಚಟುವಟಿಕೆಗೆ ಮುಂದಾದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಕೆಲವರು ಕಿಟಕಿಯ ಮೂಲಕ ಚಿತ್ರೀಕರಣ ಮಾಡಿಕೊಂಡು ಮಾಧ್ಯಮಗಳಿಗೆ ನೀಡಿದ್ದರು. ಡಿವೈಎಸ್ಪಿ ಲೈಂಗಿಕ ದೌರ್ಜನ್ಯ ಪ್ರಕರಣ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮಾಧ್ಯಮಗಳ ವರದಿ ಆಧರಿಸಿ ಎಸ್ಪಿ ಕೆ.ವಿ ಅಶೋಕ್ ವರದಿ ನೀಡಿದ್ದರು. ಇವರ ವರದಿ ಆಧರಿಸಿ ಅಮಾನತ್ತು ಮಾಡಲಾಗಿದೆ.
ಈ ಹಿಂದೆಯೂ ಇವರ ಬಗ್ಗೆ ದೂರುಗಳು ಕೇಳಿ ಬಂದಿದ್ದವಾದರೂ ಯಾವುದೇ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಬಚಾವಾಗಿದ್ದರು. ಆದರೆ ಗುರುವಾರ ಸಾಕ್ಷ್ಯಾಧಾರಗಳ ಸಮೇತ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿದ್ದಾರೆ.


