ಇಂದು ಸಮಾಜದಲ್ಲಿ ಶಿಕ್ಷಣವಿದ್ದರೆ ಮಾತ್ರ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ, ಆಸ್ತಿ, ಭೂಮಿ, ಮನೆ ಅಥವಾ ಚಿನ್ನಕ್ಕಿಂತ ಶಿಕ್ಷಣವೇ ಮನುಷ್ಯನಿಗೆ ದೊಡ್ಡ ಆಸ್ತಿ ಎಂದು ಡಿಸಿ ಶುಭಕಲ್ಯಾಣ್ ತಿಳಿಸಿದರು.
ತುಮಕೂರು ನಗರದ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ತುಮಕೂರು ಸ್ಲಂ ಭವನದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿ ಬಾಪುಲೆ 194ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ತ್ರೀ ಸಮಾಜದ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥದಿಂದ ಶ್ರಮಿಸಿದ ಮಹಾತಾಯಿ ಸಾವಿತ್ರಿಬಾಯಿ, ಸಮಾಜ ನೀಡಿದ ಎಲ್ಲಾ ಅವಮಾನಗಳನ್ನು ಬದಿಗಿಟ್ಟು ಸಾಕ್ಷರತೆಯ ದೀಪ ಬೆಳಗಿದವರು ಸಾವಿತ್ರಿ ಬಾಯಿಪುಲೆ. ಇಂದು ದುಡಿಯುವ ಮಹಿಳೆಯರು ಸೇರಿ ಅವರನ್ನು ಸ್ಮರಿಸುತ್ತಿರುವುದು ಅರ್ಥಪೂರ್ಣವಾಗಿದೆ. 19ನೇ ಶತಮಾನದಲ್ಲಿ ಸತ್ಯಶೋಧಕ ಸಮಾಜದಿಂದ ಮಹಿಳಾ ವಿಮೋಚನೆಗಾಗಿ ಕನಸ್ಸು ಕಟ್ಟಿಕೊಟ್ಟ ಮೊಟ್ಟ ಮೊದಲ ಮಹಿಳಾ ಹೋರಾಟಗಾರ್ತಿಯಾಗಿ ಸಾವಿತ್ರಿ ಬಾಯಿಪುಲೆಯವರು ಶ್ರಮಿಸಿರುವುದರಿಂದ ಮಹಿಳಾ ಹಕ್ಕುಗಳು ದೊರೆತಿದೆ ಎಂದು ಹೇಳಿದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ ಅಶ್ವಿಜ ಮಾತನಾಡಿ, 35 ವಾರ್ಡ್ಗಳಲ್ಲಿರುವ ಸ್ಲಂಗಳ ಮೂಲಭೂತ ಸೌಕರ್ಯಗಳ ಕುರಿತು ಅಧ್ಯಯನ ಮಾಡಿ ನೀರು ಶೌಚಾಲಯ, ರಸ್ತೆ, ಚರಂಡಿ, ಇನ್ನಿತರೆ ಸೌಲಭ್ಯಗಳನ್ನು ದೊರಕಿಸಿಕೊಡಲು ನಗರಪಾಲಿಕೆಯಿಂದ ಪ್ರತೈಕ ಯೋಜನೆಯನ್ನು ಸಿದ್ದಗೊಳಿಸಲಾಗುತ್ತಿದೆ, ಹಾಗೇ ಮುಂದಿನ ದಿನಗಳಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುತ್ತಿದ್ದು ಇದರಲ್ಲಿ ಸ್ಲಂ ನಿವಾಸಿಗಳು ಭಾಗಿಯಾಗಬೇಕು. ಇದರ ಮೂಲಕ ನಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಕಾರ್ಯದರ್ಶಿ ಅನುಪಮಾ ವಹಿಸಿದ್ದರು, ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ತೃತೀಯ ಲಿಂಗಿಗಳ ಮುಖಂಡರಾದ ದೀಪಿಕಾ, ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಪೂರ್ಣಿಮಾ, ಸುಧಾ, ತುಮಕೂರು ಸ್ಲಂ ಸಮಿತಿಯ ಶಾರದಮ್ಮ, ಗುಲ್ನಾಜ್, ಮಹದೇವಮ್ಮ ಇದ್ದರು. ಅರುಣ್ ಸ್ವಾಗತಿಸಿದರು. ತಿರುಮಲಯ್ಯ ನಿರೂಪಿಸಿದರು. ಕೃಷ್ನಮೂರ್ತಿ ವಂದಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಶಂಕ್ರಯ್ಯ, ಕಣ್ಣನ್, ಗಣೇಶ್, ಧನಂಜಯ್, ಮನೋಜ್, ಚಿಕ್ಕಗಂಗಮ್ಮ, ವೆಂಕಟೇಶ್, ಪುಟ್ಟರಾಜು, ನಂಜಮ್ಮ, ವಹಿಸಿದ್ದರು.


