ರಾಜ್ಯ ಸರ್ಕಾರ 2000 ಕೋಟಿ ರೂ. ಸಾಲ ಪಡೆಯಲು ಮತ್ತು ಸಾಲ ನೀಡುವ ಸಂಸ್ಥೆಗಳಿಗೆ ಖಾತ್ರಿ ಮಾಡಲು ಉದ್ದೇಶಪೂರ್ವಕವಾಗಿಯೇ ರಾಜ್ಯ ಸಾರಿಗೆ ಬಸ್ಗಳ ಟಿಕೆಟ್ ದರವನ್ನು ಶೇ.15 ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧುಸ್ವಾಮಿ ಆರೋಪಿಸಿದರು.
ಕಳೆದ ಎರಡು ವರ್ಷಗಳಿಂದ ಕೆಎಸ್ಆರ್ಟಿಸಿಯ ಎಲ್ಲ ನಿಗಮಗಳು ಲಾಭದಲ್ಲಿವೆ ಎಂದು ಸುಳ್ಳು ಹೇಳಿಕೊಂಡು ಬರುತ್ತಿದ್ದ ಸರ್ಕಾರ ಇದಕ್ಕಿದ್ದಂತೆ ಬಸ್ ಪ್ರಯಾಣ ದರ ಹೆಚ್ಚಿಸಿ ಸಾಮಾನ್ಯ ಜನರು ನಿತ್ಯ ಪರದಾಡುವಂತೆ ಮಾಡಿದೆ. ಸರ್ಕಾರದ ಎಲ್ಲ ಬಸ್ ನಿಗಮಗಳು ಲಾಭದಾಯವಾಗಿ ನಡೆಸಲು ಅವಕಾಶವಿದ್ದರೂ ಭ್ರಷ್ಟಾಚಾರ, ಕಿಕ್ಬ್ಯಾಕ್, ಲಂಚದಿಂದ ತತ್ತರಿಸಿರುವ ನಿಗಮಗಳು ಜನರಿಗೆ ಹೆಚ್ಚಿನ ದರ ನಿಗದಿ ಮಾಡುವುದರ ಮೂಲಕ ಇನ್ನಷ್ಟು ವಂಚನೆ ಮಾಡಲು ಸಿದ್ಧವಾಗಿವೆ ಎಂದು ದೂರಿದ್ದಾರೆ.
ಕೆಎಸ್ಆರ್ಟಿಸಿ ಎಲ್ಲಾ ನಿಗಮಗಳನ್ನು ಸಾಲದ ಸುಳಿಯಲ್ಲಿ ಮುಳಿಗಿಸಿ ಈಗಾಗಲೇ ಮೊದಲೇ ನಿಗದಿಯಾಗಿರುವಂತೆ ಎಲ್ಲಾ ನಿಗಮಗಳನ್ನು ಲಾಭಕೋರ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಲು ಹುನ್ನಾರ ನಡೆಸಿದೆ. ಈ ಹುನ್ನಾರದ ಮೊದಲ ಪ್ರಯತ್ನವೇ ಬಸ್ ಪ್ರಯಾಣ ದರ ಏರಿಕೆ ಎಂದು ಖಂಡಿಸಿದರು.
ಪ್ರತಿ ದಿನವೂ ಒಂದಲ್ಲ, ಒಂದು ಬೆಲೆ ಏರಿಕೆ ಮಾಡುತ್ತಿರುವ ಸರ್ಕಾರ ಆಸ್ತಿ ತೆರಿಗೆ, ದಿನ ನಿತ್ಯ ಬಳಸುವ ವಸ್ತುಗಳ ಬೆಲೆಯನ್ನೂ ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಸರ್ಕಾರ ಕನ್ನಡಿಗರ ಮೇಲೆ ಮಾಡುತ್ತಿರುವ ಪರೋಕ್ಷ ದಬ್ಬಾಳಿಕೆ ಕೂಡಲೇ ನಿಲ್ಲಿಸಬೇಕು. ಚುನಾವಣೆಗೂ ಮುನ್ನ ಒಂದು ರೀತಿಯ ಭರವಸೆ, ಚುನಾವಣೆಯಲ್ಲಿ ಗೆದ್ದ ನಂತರ ಮತ್ತೊಂದು ರೀತಿಯ ಮುಖಗಳನ್ನು ಅನಾವರಣ ಮಾಡುತ್ತಿದೆ. ಜನರು ಈಗಾಗಲೇ ಕೇಂದ್ರ ಸರ್ಕಾರದ ವಿವಿಧ ತೆರಿಗೆಗಳಿಗೆ ಜನ ನಲುಗಿದ್ದಾರೆ. ಅದರ ನಡುವೆ ರಾಜ್ಯದಲ್ಲೂ ಸುಳ್ಳು ಕೋರರು ನುಡಿದಂತೆ ನಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ತಕ್ಷಣದಿಂದಲೇ ಬಸ್ ದರ ಏರಿಕೆಯನ್ನು ಹಿಂಪಡಿಯಬೇಕು. ಇಲ್ಲದೇ ಹೋದರೆ ಸರ್ಕಾರದ ವಿರುದ್ಧ ಕನ್ನಡಿಗರು ಸಂಘಟಿತರಾಗಿ ಹೋರಾಟ ಮಾಡಿ ಇದನ್ನು ಹಿಂದಕ್ಕೆ ಪಡೆಯವಂತೆ ಮಾಡಲಾಗುವುದು ಎಂದು ಎಚ್ಚರಿಸಿದರು.


