ಸರ್ವರಿಗೂ ಶಿಕ್ಷಣ, ಉದ್ಯೋಗಕ್ಕಾಗಿ, ಸಮಸಮಾಜ ನಿರ್ಮಾಣಕ್ಕಾಗಿ ದೇಶದ ಉದ್ದಗಲಕ್ಕೂ ವಿದ್ಯಾರ್ಥಿಗಳನ್ನು ಸಂಘಟಿಸಿ ಚಳವಳಿ ರೂಪಿಸುವ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) 55ನೇ ಹಿನ್ನೆಲೆಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ನಂತರ ತುಮಕೂರಿನ ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ “ವಿದ್ಯಾರ್ಥಿ ಚಳವಳಿ ಮತ್ತು ಸವಾಲುಗಳ” ಕುರಿತು ಸಂವಾದ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಕೋಲಾರ, ಭಾರತ ವಿದ್ಯಾರ್ಥಿ ಫೆಡರೇಷನ್ ದೇಶದಲ್ಲಿ ವಿದ್ಯಾರ್ಥಿಗಳ ಮಧ್ಯೆ ಅವರ ಹಕ್ಕುಗಳಿಗಾಗಿ ಅತ್ಯಂತ ಕ್ರಿಯಾಶೀಲವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ. ದೇಶದ ಅಭಿವೃದ್ಧಿಗಾಗಿ ಉನ್ನತ ಗುಣಮಟ್ಟದ ಶಿಕ್ಷಣಕ್ಕಾಗಿ ನಿರಂತರ ಹೋರಾಟಗಳನ್ನು ರೂಪಿಸುತ್ತಾ ಬರುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ರೂಪಗೊಳ್ಳಬಹುದಾಗಿದೆ ಎಂದರು.
ಇಂದು ಕೇಂದ್ರ ಸರ್ಕಾರ ನಿರಂತರವಾಗಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿದ್ದು, ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟ ಅನಿವಾರ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೋಮುವಾದಿ, ಕೇಸರೀಕರಣ ಮಾಡುವ ಮೂಲಕ ಪಠ್ಯಪುಸ್ತಕ ಬದಲಾವಣೆ, ಶಿಕ್ಷಣದ ಗುಣಮಟ್ಟ ಕುಸಿತ ಎನ್ಇಪಿ ಹೆಸರಿನಲ್ಲಿ ಪದವಿಯನ್ನು ನಾಲ್ಕು ವರ್ಷ ಮಾಡಿ ಹೆಚ್ಚು ಸಮಯದವರೆಗೆ ಅಧ್ಯಯನ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ಇದುವರೆಗೂ ವಿವಿಗಳಲ್ಲಿ ಎನ್ಇಪಿಯಿಂದ ಉಂಟಾಗಿರುವ ಫಲಿತಾಂಶ ಮತ್ತು ಅಂಕಪಟ್ಟಿ ಗೊಂದಲ ವಿದ್ಯಾರ್ಥಿ ವೇತನ ಗೊಂದಲ ಈ ರೀತಿ ಅನೇಕ ಅವಾಂತರಗಳನ್ನು ಸೃಷ್ಟಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕೆಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ಹಾಗೂ ವಕೀಲ ಈ. ಶಿವಣ್ಣ ಜಿಲ್ಲೆಯಲ್ಲಿ ವಿದ್ಯಾರ್ಥಿ ಚಳವಳಿಗೆ ತನ್ನದೇ ಆದ ಇತಿಹಾಸ ಇದೆ. ರಾಜ್ಯ ಮಟ್ಟದ ನಾಯಕತ್ವ ನೀಡುವಲ್ಲೂ ಸಹ ಸಕ್ರಿಯವಾಗಿದೆ. ಇಂತಹ ಚಳವಳಿಯನ್ನು ವಿದ್ಯಾರ್ಥಿಗಳು ಬೆಳೆಸಬೇಕಾಗಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯಗಳಾದಾಗ ಮತ್ತು ಹಾಸ್ಟೆಲ್ ಸಮಸ್ಯೆಗಳು ಉಂಟಾದಾಗ ಎಸ್ಎಫ್ಐ ನಿರಂತರವಾಗಿ ಹೋರಾಟ ರೂಪಿಸಿದೆ. ವಿವಿಯ ಶುಲ್ಕ ಏರಿಕೆ, ಫಲಿತಾಂಶ ವಿಳಂಬ ಪ್ರತ್ಯೇಕ ಕ್ಯಾಂಪಸ್ಗೆ ಜಾಗ ಮಂಜೂರಾತಿ ಸೇರಿದಂತೆ ವಿದ್ಯಾರ್ಥಿಗಳ ಪರವಾದ ಹೋರಾಟಗಳನ್ನು ರೂಪಿಸಿ ಯಶಸ್ವಿಯಾಗಿದೆ. ಇಂತಹ ವಿದ್ಯಾರ್ಥಿ ಸಂಘಟನೆಯು 55ರ ಸಂಭ್ರಮಾಚರಣೆಯನ್ನು ಆಚರಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ವಿಜಯಕುಮಾರ್ ಮೈಸೂರು, ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ. ದೊಡ್ಡ ಬಸವರಾಜ ಗುಳೇದಾಳು, ಪದಾಧಿಕಾರಿಗಳಾದ ಸುಜಾತಾ ಕಲಬುರ್ಗಿ, ಅನುಷಾ ಬೆಂಗಳೂರು, ಸಮಾಜಿಕ ಜಾಲತಾಣ ಸಂಚಾಲಕ ಬಾಲಾಜಿ ಕೊಪ್ಪಳ, ಮುಖಂಡರಾದ ರಮೇಶ್ ವೀರಾಪೂರು, ಪ್ರಧಾನ್, ಸಬೀನಾ, ಅಂಕಿತಾ, ಮಂಜುನಾಥ, ರಮೇಶ್, ಸೇರಿದಂತೆ ವಸತಿ ನಿಲಯದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


