ಪರೀಕ್ಷೆ, ಅಂಕ ಗಳಿಕೆ, ಸರಕಾರಿ ಉದ್ಯೋಗ ಇವಿಷ್ಟೇ ಶಿಕ್ಷಣದ ಉದ್ದೇಶ ಎಂಬಂತಹ ಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವುದೇ ನಿಜವಾದ ಶಿಕ್ಷಣ ಎಂದು ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದ್ದಾರೆ.
ತುಮಕೂರು ನಗರದ ಸಿದ್ದಗಂಗಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ 2024-25ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸೆಮಿಸ್ಟರ್ ಶಿಕ್ಷಣ ಪದ್ದತಿಯಿಂದ ಮಕ್ಕಳಲ್ಲಿನ ಪ್ರತಿಭೆ ಕಮರಿ ಹೋಗುತ್ತಿದ್ದು, ಮಕ್ಕಳ ಸಮಗ್ರ ವಿಕಾಸಕ್ಕೆ ಪೆಟ್ಟು ಬೀಳುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಆಳುವ ಸರಕಾರಗಳು ಆಲೋಚಿಸುವ ಅಗತ್ಯವಿದೆ ಎಂದರು.
ಸೆಮಿಸ್ಟರ್ ಪದ್ದತಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪಠ್ಯ ವಿಷಯಗಳನ್ನು ತುಂಬಿ, ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದಗೊಳಿಸಲು ಹೊರಟ ಪರಿಣಾಮ, ಮಕ್ಕಳಲ್ಲಿ ತಾವು ಕಲಿಯುವ ಯಾವ ವಿಚಾರದ ಬಗ್ಗೆಯೂ ಆಳವಾದ ಜ್ಞಾನ ಇಲ್ಲದಂತಾಗಿದೆ. ಕೋವಿಡ್-19 ಆಗಮನದ ನಂತರ ಮಕ್ಕಳನ್ನು ಮೊಬೈಲ್ ದಾಸರನ್ನಾಗಿ ಮಾಡಿದೆ. ಪುಸ್ತಕಕ್ಕಿಂತ, ಮೊಬೈಲ್ನಲ್ಲಿ ಜ್ಞಾನ ಹುಡುಕಲು ಯುವಜನರು ಉತ್ಸುಕರಾಗಿದ್ದಾರೆ. ಸೋಸಿಯೆಲ್ ಮೀಡಿಯಾದಲ್ಲಿ ಬರುವುದೆಲ್ಲಾ ಸತ್ಯವೆಂದು ತಿಳಿದು ಮುನ್ನೆಡೆಯುವ ಪರಿಣಾಮ ಹಲವಾರು ಸಂಕಷ್ಟಗಳಿಗೆ ತುತ್ತಾಗುತಿದ್ದಾರೆ. ಇದರಿಂದ ಮಕ್ಕಳು ಹೊರಬರಬೇಕು ಎಂದರು.
ಕಾಮಿಡಿ ಕಿಲಾಡಿಯ ಹಾಸ್ಯನಟ ಗಿಲ್ಲಿ ನಟರಾಜ್ ಮಾತನಾಡಿ, ಮೊಬೈಲ್ನಲ್ಲಿ ಒಳ್ಳೆಯದು ಇದೆ, ಕೆಟ್ಟದ್ದು ಇದೆ. ಅದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟದ್ದು,ಹಳ್ಳಿಯ ಮೂಲೆಯೊಂದರಲ್ಲಿದ್ದ ನನ್ನನ್ನು ನಾಡಿನ ಜನರಿಗೆ ಪರಿಚಯಿಸಿದ್ದು ಸೋಷಿಯಲ್ ಮೀಡಿಯಾ, ಮೊದಲು ಅವಮಾನ, ಈಗ ಸನ್ಮಾನ ಆರಂಭವಾಗಿದೆ. ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕಿನತ್ತ ಗಮನಹರಿಸಿ ಎಂದರು.
ಸಿದ್ದಗಂಗಾ ಕಲಾ, ವಾಣಿಜ್ಯ ಮತ್ತ ವಿಜ್ಞಾನ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ದಕ್ಷಿಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪಾವನ.ಬಿ.ಎಸ್., ದಿವ್ಯ.ಕೆ, ಎಸ್.ಯತಿರಾಜು, ನಿಶ್ಚಲ, ಹೇಮ.ಬಿ.ಸಿ., ನಯನ.ಕೆ.ಆರ್, ಡಾ.ಜಗದೀಶ್.ಎಂ ಮತ್ತಿತರರು ಇದ್ದರು.


