ಕೆರೆ ಅಭಿವೃದ್ಧಿ ಕೆಲಸದಲ್ಲಿ ಸ್ನಾತಕೋತ್ತರ ಪದವಿ ಪಡೆದವರೂ ತೊಡಗಿಸಿಕೊಂಡಿದ್ದು ಅವರು ಕೂಳಿಲ್ಲದೆ ಈ ಕೆಲಸವನ್ನು ಮಾಡುತ್ತಿಲ್ಲ. ಬದಲಿಗೆ ಸಮಾಜಸೇವೆ ಮಾಡಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ರಾಜ್ಯದಲ್ಲಿ18 ಕೋಟಿ ಮಾನವ ದಿನಗಳು ಕೆಲಸ ದೊರೆತಿದೆ. ಕೇಂದ್ರ ಸರ್ಕಾರ ರಾಜ್ಯದ ಪ್ರಗತಿಯನ್ನು ನೋಡಿ ಮೊದಲ ಸ್ಥಾನ ನೀಡಿದೆ. ಹಾಗೆಯೇ ಕಳೆದ ಬಾರಿ 800 ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಸಹ ಬಿಡುಗಡೆ ಮಾಡಿ ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇನ್ನೂ ಶೌಚಾಲಯ ನಿರ್ಮಾಣ ಆಗಬೇಕು. ಎಲ್ಲರೂ ಶೌಚಾಲಯ ಹೊಂದಬೇಕು. ಇದಕ್ಕಾಗಿ ಪಿಡಿಒ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರಮಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಹಾಗೆಯೇ ಎಸ್.ಸಿ. ಎಸ್.ಟಿ. ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಲು ಹಿಂದೆ 15 ಸಾವಿರ ರೂಪಾಯಿ ನೀಡಲಾಗುತ್ತಿತ್ತು. ನಾನು ಗ್ರಾಮೀಣಾಭಿವೃದ್ಧಿ ಸಚಿವನಾದ ಮೇಲೆ ಈ ಹಣವನ್ನು 20 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.
ನಾನಿಲ್ಲಿ ಭಾಷಣ ಮಾಡಲು ಬಂದಿಲ್ಲ. ನೀವು ಸಹ ಭಾಷಣ ಕೇಳಲು ಬಂದಿಲ್ಲ. ಭಗವಂತ ನಮಗೆ ಅಧಿಕಾರ ಕೊಟ್ಟಿದ್ದಾನೆ. ಈ ಅವಕಾಶವನ್ನು ಬಳಸಿಕೊಂಡು ಕೆಲಸ ಮಾಡಿದರೆ ಭಗವಂತೆ ಒಳ್ಳೆಯದು ಮಾಡುತ್ತಾನೆ. ಪಿಡಿಓ ಮತ್ತು ಆಧ್ಯಕ್ಷರು ಭಗವಂತನ ಸೇವೆ ಮಾಡಬೇಕು. ಇದನ್ನು ಸದುಪಯೋಗ ಮಾಡಿಕೊಳ್ಳದವರು ಅಯೋಗ್ಯರು. ಕೆಟ್ಟ ಕೆಲಸ ಮಾಡುವವರಿಗೆ ಪಾಪ ಸುತ್ತಿಕೊಳ್ಳುತ್ತದೆ. ಕೆಲಸ ಮಾಡದ ಪಿಡಿಓ ಮಕ್ಕಳಿಗೆ ಲಕ್ವಾ ಹೊಡೆಯುತ್ತದೆ. ಇದು ಸತ್ಯ. ಭಗವಂತ ಸುಮ್ಮನೆ ಕೂರುವುದಿಲ್ಲ ಎಂದು ಈಶ್ವರಪ್ಪ ಎಲ್ಲವೂ ಭಗವಂತನ ಮೇಲೆ ಹಾಕಿದರು.
ಚಂದ್ರಶೇಖರ್ ಪ್ರಧಾನಿ ಆಗಿದ್ದ ವೇಳೆ ನಮ್ಮ ದೇಶ ಭಿಕ್ಷುಕರ, ಬಡವರ ದೇಶವಾಗಿತ್ತು. 160 ರಾಷ್ಟ್ರಗಳು ನಮಗೆ ನೆರವು ನೀಡುತ್ತಿದ್ದವು. ಸಾಕಷ್ಟು ಸಾಲವೂ ಇತ್ತು. ಇಂದು ನಮ್ಮ ದೇಶ ಆ ಎಲ್ಲಾ ದೇಶಗಳ ಸಾಲವನ್ನು ತೀರಿಸಿದೆ. ಸ್ವಾಲಂಬಿಯಾಗಿದೆ. ನಮ್ಮ ದೇಶವೇ 50 ದೇಶಗಳಿಗೆ ಸಾಲವನ್ನು ನೀಡುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಸಾಕಷ್ಟು ಸಾಧನೆ ಆಗಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಕೆರೆಯನ್ನು ಒತ್ತುವರಿ ಯಾರೇ ಮಾಡಿಕೊಂಡಿದ್ದರೂ ಸುಮ್ಮನೆ ಬಿಡುವುದಿಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಂದ ಒತ್ತುವರಿ ತೆರವು ಮಾಡಿಸದೆ ಬಿಡುವುದಿಲ್ಲ. ಪೊಲೀಸರ ಬಲವನ್ನು ಬಳಸಿಕೊಂಡು ಕೆರೆ ಒತ್ತುವರಿದಾರರನ್ನು ತೆರವು ಮಾಡುವುದು ಶತಃಸಿದ್ಧ. ಯಾರನ್ನೂ ಬಿಡುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದರು ಸಚಿವ ಈಶ್ವರಪ್ಪ. ತುಮಕೂರಿನಲ್ಲಿ ಪಿಡಿಓಗಳು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತುಮಕೂರು ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಇನ್ನು 6 ತಿಂಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಬೇಕು. ದಾಖಲೆಗಳನ್ನು ಕೇಳಿಕೊಂಡು ಬರುವ ರೈತರನ್ನು ವಿದ್ಯುತ್ ಇಲ್ಲವೆಂಬ ನೆಪ ಹೇಳಿ ಕಳಿಸಬಾರದು. ಸೋಲಾರ್ ಹೊಂದಿ ಜನರ ನೆರವಿಗೆ ಪ್ರಯತ್ನಿಸಬೇಕು. ಸೋಲಾರ್ ಯಾವ ಗ್ರಾಮ ಪಂಚಾಯ್ತಿಯಲ್ಲೂ ಇಲ್ಲವೆಂಬುದನ್ನು ಅಧ್ಯಕ್ಷರು ಕೈ ಎತ್ತುವ ಮೂಲಕ ಸಚಿವರ ಗಮನಕ್ಕೆ ತಂದರು.