ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಹಾಗೂ ಮಾಜಿ ಲೋಕಸಭಾ ಸದಸ್ಯೆ ಸುಸ್ಮಿತ ದೇವ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ರಾಜಿನಾಮೆಗೆ ಯಾವುದೇ ಕಾರಣಗಳನ್ನು ನೀಡಿಲ್ಲ. ರಾಜಿನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮಮತ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಈಶಾನ್ಯ ಭಾಗದಿಂದ 7 ಬಾರಿ ಲೋಕಸಭಾ ಸದಸ್ಯರಾಗಿದ್ದ ಮಾಜಿ ಲೋಕಸಭಾ ಸದಸ್ಯ ಸಂತೋಷ್ ಮೋಹನ್ ದೇವ್ ಅವರ ಪುತ್ರಿ ಸುಸ್ಮಿತ ದೇವ್ ಇಂದು ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಅಸ್ಸಾಂ ಸಿಲ್ಚಾರ್ ಕ್ಷೇತ್ರದಿಂದ ಒಂದು ಬಾರಿ ಲೋಕಸಭಾ ಸದಸ್ಯರಾಗಿದ್ದ ಸುಸ್ಮಿತ ದೇವ್ ಕಾಂಗ್ರೆಸ್ ನಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಸುಸ್ಮಿತ ದೇವ್, ತಮ್ಮ ಪಕ್ಷ, ನಾಯಕರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಗಾಂಧಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಸುಸ್ಮಿತ ದೇವ್ ಕಾಂಗ್ರೆಸ್ ತೊರೆದಿರುವುದು ತೀವ್ರ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪತ್ರದಲ್ಲಿ ‘ಸಾರ್ವಜನಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ’. ನನ್ನ ಕಾಂಗ್ರೆಸ್ ಪಕ್ಷದ ಜೊತೆಗಿನ ಮೂರು ದಶಕಗಳ ಸಂಬಂಧ ನೆನಪಾಗಿ ಉಳಿಯಲಿದೆ. ಇದಕ್ಕಾಗಿ ಸೋನಿಯಾಗಾಂಧಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸೋನಿಯಾ ನನಗೆ ಮಾರ್ಗದರ್ಶಕಿ’ ಎಂದು ಸ್ನರಿಸಿದ್ದಾರೆ.
ಆಲ್ ಇಂಡಿಯಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಈಗ ಸುಸ್ಮಿತ ದೇವ್ ತೃಣಮೂಲ ಕಾಂಗ್ರೆಸ್ ಕುಟುಂಬದ ಸದಸ್ಯರಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರಿಂದ ಸ್ಫೂರ್ತಿ ಪಡೆದಿರುವ ಸುಸ್ಮಿತ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಸಂಸದ ಡೆರೇಕ್ ಒ ಬ್ರಿಯನ್ ಸಮ್ಮುಖದಲ್ಲಿ ಟಿಎಂಸಿಗೆ ಸೇರ್ಪಡೆಯಾಗಿರುವುದಾಗಿ ಎಐಟಿಸಿ ಟ್ವಿಟ್ಟರ್ ನಲ್ಲಿ ಪೋಟೋ ಸಹಿತ ಮಾಹಿತಿಯನ್ನು ಹಂಚಿಕೊಂಡಿದೆ.
ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದಂತೆಯೇ ತನ್ನ ಟ್ಟಿಟ್ಟರ್ ಖಾತೆಯಲ್ಲಿ ಮಾಜಿ ಮಹಿಳಾ ವಿಭಾಗದ ಅಧ್ಯಕ್ಷೆ ಎಂದು ಸುಸ್ಮಿತ ದೇವ್ ಬದಲಾವಣೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸುಸ್ಮಿತ ದೇವ್ ಪ್ರಾದೇಶಿಕ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದ ಪಾತ್ರ ವಹಿಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.