ಏಳನೇ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 20 ಸಾವಿರ ಕೋಟಿ ರೂಗಳು ಹೊರೆಯಾಗಲಿದೆ. ಆದರೂ ಸರ್ಕಾರಿ ನೌಕರರ ಹಿತ ಕಾಯುವ ದೃಷ್ಟಿಯಿಂದ ವೇತನ ಪರಿಷ್ಕರಣೆ ಮಾಡಿ ಜಾರಿಗೊಳಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್ಕಾರ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಬದ್ದವಾಗಿದ್ದು, ಸರ್ಕಾರಕ್ಕೆ ವಾರ್ಷಿಕ 20 ಸಾವಿರ ಕೋಟಿ ಹೊರೆಯಾದರೂ ಸಹ 7 ನೇ ವೇತನ ಆಯೋಗ ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ಹಿತ ಕಾಯಲಾಗಿದೆ ಎಂದರು.
ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಓಪಿಎಸ್ ಜಾರಿಗೆ ನಮ್ಮ ಪಕ್ಷ ಬದ್ದವಾಗಿದೆ. ಹಿಂಬಡ್ತಿಯಿಂದ ರಾಜ್ಯದ 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಇದನ್ನು ಪರಿಶೀಲನೆ ನಡೆಸಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಗಮನಕ್ಕೆ ತಂದಿದ್ದು, ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಲಾಗಿದೆ. ಇದರ ಬಗ್ಗೆ ನನ್ನ ಮೇಲೆ ವಿಶ್ವಾಸವಿಡಿ ಎಂದು ಶಿಕ್ಷಕರಿಗೆ ಭರವಸೆ ನೀಡಿದರು.
ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸಿಎಸ್ಆರ್ ಫಂಡ್ನಲ್ಲಿ ಒದಗಿಸಲು ಬದ್ದ ಎಂದರು.
ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶೀರಾನ್ ತಾಜ್, ಡಿಡಿಪಿಐ ಗಿರಿಜಾ, ಶಿಕ್ಷಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟ ರಂಗಾರೆಡಿ,್ಡ ತಾಲೂಕು ಅಧ್ಯಕ್ಷ ಸಂಜಯ್, ಡಿಡಿವೈಎಸ್ಪಿ ರಾಮಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಗಂಗಣ್ಣ ನಂಜುAಡಯ್ಯ, ಪಿಯುಸಿ ಡಿಡಿಪಿಐ ಬಾಲಗುರುಮೂರ್ತಿ ಮೊದಲಾದವರು ಇದ್ದರು.