ನಿನ್ನೆ ರಾತ್ರಿ ನಿಧನರಾದ ನಿವೃತ್ತ ಪ್ರಾಂಶುಪಾಲ, ಜನಪರ ಚಿಂತಕ, ಇತಿಹಾಸ ಪ್ರಾಧ್ಯಾಪಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರ ತುಮಕೂರಿನ ನಿವಾಸದಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಹಲವು ಮಂದಿ ಗಣ್ಯರು ಪಡೆದರು.
ಸೆ.3ರಂದು ಬೆಳಗ್ಗೆ ತುಮಕೂರು ನಗರದ ವಿನಾಯಕ ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀನಿವಾಸಯ್ಯ ಅವರ ಮನೆಗೆ ಭೇಟಿ ನೀಡಿದ ನಾಡೋಜ ಪ್ರೊ.ಬರಗೂರು ರಾಮಚಂದ್ರ, ಜನಪರ ಚಿಂತಕ ಕೆ.ದೊರೈರಾಜ್, ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಶ್ರೀನಿವಾಸಯ್ಯ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಸಾಹಿತಿ ನಾಗರಾಜ ಶೆಟ್ಟಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಲೇಖಕಿ ಬಾ.ಹ.ರಮಾಕುಮಾರಿ, ಎಸ್.ಎ.ಖಾನ್, ಹೈಕೋರ್ಟ್ ವಕೀಲ ಎಚ್.ವಿ.ಮಂಜುನಾಥ್, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಹಿರಿಯ ಪತ್ರಕರ್ತ ಕುಚ್ಚಿಂಗಿ ಪ್ರಸನ್ನ, ವೈದ್ಯರಾದ ಡಾ.ಎಚ್.ವಿ.ರಂಗಸ್ವಾಮಿ, ಡಾ.ಅರುಂಧತಿ, ದಲಿತ ಮುಖಂಡರಾದ ನರಸೀಯಪ್ಪ, ಕೊಟ್ಟಶಂಕರ್, ವಕೀಲ ರಂಗಧಾಮಯ್ಯ ಸೇರಿದಂತೆ ಹಲವರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷೆ ಮಲ್ಲಿಕಾಬಸವರಾಜು, ಚರಕ ಆಸ್ಪತ್ರೆಯ ಡಾ. ಬಸವರಾಜು, ಕೈಗಾರಿಕೋದ್ಯಮಿ ಡಿ.ಟಿ.ವೆಂಕಟೇಶ್, ಸಾಹಿತಿಗಳಾದ ಎನ್.ನಾಗಪ್ಪ, ಡಾ.ವಡ್ಡಗೆರೆ ನಾಗರಾಜಯ್ಯ, ಸಾಮಾಜಿಕ ಹೋರಾಟಗಾರ ವಿರೂಪಾಕ್ಷ ಡ್ಯಾಗೇರಹಳ್ಳಿ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
ನಗರದ ಗಾರ್ಡನ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್, ಲೇಖಕ ಜಿ.ವಿ.ಆನಂದಮೂರ್ತಿ ಅಂತಿಮ ನಮನ ಸಲ್ಲಿಸಿದರು


