ಊಟ ಕೊಡಲಿಲ್ಲ ಎಂಬ ಕಾರಣಕ್ಕೆ ಅಡುಗೆ ಭಟ್ಟನಿಗೆ ಚಾಕುವಿನಿಂದ ಇರಿದು, ಹೋಟೆಲ್ ಮಾಲಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಚಾಕು ಇರಿತದಿಂದ ಗಾಯಗೊಂಡಿರುವ ಅಡುಗೆ ಭಟ್ಟರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕುಣಿಗಲ್ ಪಟ್ಟಣದ ರಾಜ್ಯ ಹೆದ್ದಾರಿ 33ರ ಭಕ್ತರಹಳ್ಳಿ ಸಮೀಪ ಇರುವ ಹೈವೇ ಸ್ಟೋರಿಸ್ ಡಾಬಾದಲ್ಲಿ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ 12.30.ರ ಸುಮಾರಿನಲ್ಲಿ 6 ಮಂದಿ ಇದ್ದ ಗುಂಪೊಂದು ಕಂಠಪೂರ್ತಿ ಕುಡಿದು ಹೈವೇ ಸ್ಟೋರಿಸ್ ಡಾಬಾಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆ ಗುಂಪು ಊಟ ಕೊಡುವಂತೆ ಹೇಳಿದೆ. ಇದಕ್ಕೆ ಅಡುಗೆ ಭಟ್ಟ ಊಟ ಮುಗಿದಿದೆ ಎಂದು ಹೇಳಿದ್ದಾರೆ.

ಇದರಿಂದ ಕುಪಿತಗೊಂಡ ಆ ಗುಂಪು ಅಡುಗೆ ಭಟ್ಟ ಶರತ್ ಎಂಬುವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದು ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಡಾಬಾ ಮಾಲಿಕನಿಗೆ ಮನಬಂದಂತೆ ಥಳಿಸಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದ ಐವರು ಕುಡುಕರನ್ನು ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ತಾಲ್ಲೂಕು ಕೋಡಿಹಳ್ಳಿ ಗ್ರಾಮದ ಅರುಣ್ ಕುಮಾರ್, ಹನುಮಂತ, ದೇವರಾಜು, ಅಂಜನ್ ಕುಮಾರ್ ಮತ್ತು ಹನುಮಂತ ಅವರನ್ನು ಪೊಲೀಸರು ಬಂಧಿಸಿದ್ದಾರೆ.


