ಸಾಫ್ಟ್ವೇರ್ ಕ್ಷೇತ್ರದಿಂದಾಗಿ ಫೋನ್ ಬ್ಯಾಂಕಿಂಗ್, ಆನ್ಲೈನ್ ಪೇಮೆಂಟ್ ವ್ಯವಸ್ಥೆ ಸರ್ವರಿಗೂ ಸುಲಭವಾಯಿತು. ಅದೇ ರೀತಿ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ, ಆಡಳಿತ ಹಾಗೂ ಹಣಕಾಸು ಘಟಕಗಳ ನಿಖರ ನಿರ್ವಹಣೆಗಾಗಿ ಇ-ಆಫೀಸ್ ತಂತ್ರಾಂಶ ಇಂದಿನ ಅಗತ್ಯ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯವು ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ಇ-ಆಫೀಸ್ ತಂತ್ರಾಂಶದ ಪ್ರಾಯೋಗಿಕ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲಿಯವರೆಗೂ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ವಿಧಾನಗಳನ್ನು ಬದಿಗಿಟ್ಟು, ಕಾಗದರಹಿತ ಸೇವೆಗೆ ವಿವಿಯು ಮುಂದಾಗಬೇಕು. ಸುಧಾರಿತ ತಂತ್ರಜ್ಞಾನದ ಬಳಕೆಯಿಂದ ಸಂಪಾದಿಸಿದ ಮಾಹಿತಿಯನ್ನು ಸುದೀರ್ಘ ಕಾಲ ಸಂರಕ್ಷಿಸಬಹುದು. ವಿದ್ಯಾರ್ಥಿ ಸ್ನೇಹಿ ವಿಶ್ವವಿದ್ಯಾನಿಲಯವನ್ನು ಪೋಷಕರು ಬಯಸುತ್ತಾರೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಉತ್ಪತ್ತಿಯಾಗುತ್ತಿರುವ ಜ್ಞಾನದಿಂದ ಜಗತ್ತಿನಲ್ಲಿ ಉತ್ಕೃಷ್ಟ ಮಟ್ಟದ ಆವಿಷ್ಕಾರಗಳಾಗುತ್ತಿದ್ದರೂ, ವಿಶ್ವವಿದ್ಯಾನಿಲಯ ನಿರ್ವಹಣೆಯ ಮಟ್ಟದಲ್ಲದು ಅನುಷ್ಠಾನವಾಗದಿರುವುದು ಬೇಸರ ತಂದಿದೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಮಾತನಾಡಿ, ಮುಂದುವರಿದ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವ ವಿವಿಯ ಸಿಬ್ಬಂದಿಯಲ್ಲಿ ಬರಬೇಕು. ನವೀಕರಿಸಿದ ವಿಧಾನಗಳನ್ನು ಅಳವಡಿಸಿಕೊಂಡು, ಕಾಗದರಹಿತ ಸೇವೆಯನ್ನು ಆರಂಭಿಸಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿಶ್ವಾಸ್ ಕಾರ್ಯಾಗಾರ ಉದ್ಘಾಟಿಸಿದರು.ಇ-ಆಫೀಸ್ ತಂತ್ರಾಂಶದ ಪ್ರಾಯೋಗಿಕ ತರಬೇತುದಾರ ಮಧು ಇ-ಆಫೀಸ್ ತಂತ್ರಾಂಶದ ಕುರಿತು ತರಬೇತಿ ನೀಡಿದರು. ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಇ-ಆಫೀಸ್ ತಂತ್ರಾಂಶದ ನೋಡಲ್ ಅಧಿಕಾರಿ ಸಂತೋಷ್ ಅಕ್ಕಿ ಹಾಜರಿದ್ದರು.