ಒಕ್ಕೂಟ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ದೆಹಲಿಯಲ್ಲಿ ಸಂಸತ್ ಭವನದಿಂದ ವಿಜಯವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೃಷಿ ಕಾಯ್ದೆ, ಬೆಲೆ ಏರಿಕೆ, ಇಸ್ರೇಲ್ ಸ್ಪೈವೇರ್ ಪೆಗಾಸಸ್ ವಿಷಯದಲ್ಲಿ ಪ್ರಧಾನಿ ಮೋದಿ ಸರ್ಕಾರ ನಡೆದುಕೊಂಡ ರೀತಿಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ “ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ. ನಾವು ಸಂಸತ್ ನಲ್ಲಿ ಪೆಗಾಸಸ್, ಹಣದುಬ್ಬರ, ರೈತರ ವಿಷಯಗಳನ್ನು ಪ್ರಸ್ತಾಪಿಸಲು ಸಿದ್ದತೆ ಮಾಡಿಕೊಂಡಿದ್ದವು. ಆದರೆ ಸರ್ಕಾರ ಸಂಸತ್ ನಲ್ಲಿ ಪತ್ರಿಪಕ್ಷಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಹಾಗಾಗಿ ಸದನದಲ್ಲಿ ಮಾತನಾಡಲು ಅವಕಾಶ ನೀಡದ ವಿಷಯವನ್ನು ನಿಮ್ಮ ಮುಂದೆ ಮಾತನಾಡುತ್ತಿದ್ದೇವೆ” ಎಂದರು.
ಸದನದಲ್ಲಿ ರಾಜ್ಯಸಭೆಯ ಮಹಿಳಾ ಸದಸ್ಯರೊಬ್ಬರ ಮೇಲೆ ದೈಹಿಕ ದಾಳಿ ನಡೆದಿದೆ. ಈ ಮೂಲಕ ಸಂಸತ್ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಕಲ್ಪಿಸಿಲ್ಲ. ಶೇಕಡ 60ರಷ್ಟು ಜನಪ್ರತಿನಿಧಿಗಳು ದೇಶದ ಸಮಸ್ಯೆಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಾತನಾಡಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಆದರೆ ಶೇಕಡ 60ರಷ್ಟು ಸದಸ್ಯರ ಧ್ವನಿಯನ್ನು ಅಡಗಿಸಲಾಗಿದೆ. ಇದಕ್ಕೆ ರಾಜ್ಯಸಭೆಯಲ್ಲಿ ನಡೆದಿರುವ ದೈಹಿಕ ದಾಳಿಯೇ ನಿದರ್ಶನ ಎಂದು ತಿಳಿಸಿದರು.
ರಾಜ್ಯಸಭೆಯಲ್ಲಿ ಮಹಿಳಾ ಸದಸ್ಯರ ಮೇಲೆ ದಾಳಿ ನಡೆದಿರುವುದು ಇದೇ ಮೊದಲು. ಪುರುಷ ಮಾರ್ಷಲ್ ಗಳು ಮಹಿಳಾ ಸದಸ್ಯರೊಮಬ್ಬರ ಮೇಲೆ ದೈಹಿಕ ದಾಳಿ ಮಾಡಿದರು. ಹೊಗಿನವರು ಸಂಸತ್ ಸದಸ್ಯರನ್ನು ಹಿಡಿದು ತಳ್ಳುವುದನ್ನು ನೋಡಿ ಸಭಾಪತಿಗಳು ಕಣ್ಣೀರು ಹಾಕಿದರು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂದಿ ಹೇಳಿದ್ದಾರೆಂದು ದಿ ವೈರ್ ವರದಿ ಮಾಡಿದೆ.
ರಾಷ್ಟ್ರೀಯ ಕಾಂಗ್ರೆಸ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ “ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥದ್ದನ್ನು ನೋಡಿಲ್ಲ. ಆದರೆ ಬುಧವಾರ ಮಹಿಳಾ ಸದಸ್ಯರೊಬ್ಬರ ಮೇಲೆ ದೈಹಿಕ ದಾಳಿಯಾಗಿದ್ದು ನೋಡಿ ನೋವಾಯಿತು” ಎಂದು ಹೇಳಿದ್ದಾರೆ.
ಶಿವಸೇನೆ ಸದಸ್ಯ ಸಂಜಯ್ ರಾವತ್ ಮಾತನಾಡಿ “ಹೊರಗಿನವರನ್ನು ಮಾರ್ಷಲ್ ಹುಡುಪಿನಲ್ಲಿ ಸಂಸತ್ ಗೆ ಕರೆಸಿ ಮಹಿಳಾ ಸದಸ್ಯರ ಮೇಲೆ ದಾಳಿ ಮಾಡಿಸಲಾಗಿದೆ. ಇದನ್ನು ನೋಡಿ ನಾನು ಸಂಸತ್ ನಲ್ಲಿದ್ದೇನೆಯೇ ಅಥವಾ ಪಾಕಿಸ್ತಾನದ ಗಡಿಯಲ್ಲಿ ನಿಂತಿದ್ದೇನೆಯೇ ಎಂಬ ದಿಗ್ಬ್ರಮೆ ಉಂಟಾಯಿತು” ಎಂದು ತಿಳಿಸಿದ್ದಾರೆ.