ಬಂಡಾಯ ಸಾಹಿತಿ, ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರದ ಭೂಮಿ ಪೂಜೆಯನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕು ಬರಗೂರಿನಲ್ಲಿ ನೇರವೆರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ರಾಜಪ್ಪ ದಳವಾಯಿ, ಬರಗೂರು ರಾಮಚಂದ್ರಪ್ಪ ಅವರು ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಊರಿನ ಜೊತೆ ಕಳ್ಳು-ಬಳ್ಳಿ ಸಂಬಂಧ ಹೊಂದಿರುವವರು ಆಗಿದ್ದಾರೆ. ಗ್ರಾಮೀಣ ಭಾಗದ ಜನರ ಮನಸ್ಸಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನೆಲೆಯೊರಿಸಲು ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಈ ಸಾಂಸ್ಕೃತಿಕ ಕೇಂದ್ರವು ಗ್ರಂಥಾಲಯ, ಸಭಾಂಗಣ, ಸೇರಿದಂತೆ ನಾಟಕಗಳ ಪ್ರದರ್ಶನಕ್ಕೆ ಅನುವಾಗುವಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ನಟ ಸುಂದರರಾಜು ಅರಸು ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರ ಹೆಸರಲ್ಲಿ ಸ್ವಂತ ಊರಿನಲ್ಲೊಂದು ಸಾಂಸ್ಕೃತಿಕ ಕೇಂದ್ರಕ್ಕೆ ಭೂಮಿ ಪೂಜೆ ನಡೆಯುತ್ತಿರುವುದು ಆಶಾದಯಕ ಬೆಳವಣಿಗೆ. ಈ ಊರಿನ ಪ್ರಮುಖರ ಸಮುಖದಲ್ಲಿ ಹಾಗೂ ಸಹಕಾರದಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣೆಗೆ, ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮಾಡಲು ಭೂಮಿ ನೀಡಿದ ಜಯರಾಮಪ್ಪ ಅವರಿಗೆ ಹಾಗೂ ಸಾಂಸ್ಕೃತಿಕ ಕೇಂದ್ರದ ನೀಲಿ ನಕ್ಷೆಯನ್ನು ಮಾಡಿಕೊಟ್ಟ ಮೈತ್ರಿ ಬರಗೂರು ಅವರಿಗೆ ಧನ್ಯವಾದಗಳು ಎಂದರು.
ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಈ ಸಾಂಸ್ಕೃತಿಕ ಕೇಂದ್ರ ನಾಡಿನ ವಿದ್ಯಾರ್ಥಿ ಗಳಿಗೆ, ಅಧ್ಯಾಪಕರಿಗೆ ಕಾರ್ಯಾಗಾರಗಳು, ತರಬೇತಿ ಶಿಬಿರಗಳು, ನಾಟಕ, ಸಿನಿಮಾದಂತಹ ಪ್ರದರ್ಶನ ಹಾಗೂ ಕಲೆ ಸಾಹಿತ್ಯ ಅಭಿರುಚಿಯನ್ನು ಪ್ರೋತ್ಸಾಹಿಸುವ ಕೇಂದ್ರವಾಗಲಿದೆ ಎಂದರು.
ಬರಗೂರಿನ ಕೃಷ್ಣಗೌಡ, ಪರಮೇಶಗೌಡ, ಹಲಗೂಂಡೆ ಗೌಡ ಮಾತನಾಡಿದರು. ಈ ವೇಳೆ ತುಮಕೂರು ವಿವಿ ಅಧ್ಯಾಪಕರಾದ ನಾಗಭೂಷಣ್ ಬಗ್ಗನಡು, ಡಾ.ಓ ನಾಗರಾಜಯ್ಯ, ಉಪನ್ಯಾಸಕ ಶಿವಣ್ಣ ಎಂ ದೊರೆ, ಜಯರಾಮಪ್ಪ, ಇಂಜನಿಯರ್ ಶ್ರೀಕಂಠ ಮತ್ತಿತರರು ಹಾಜರಿದ್ದರು.