ದಲಿತ ಎಂಬ ಪರಿಕಲ್ಪನೆಯನ್ನು ಮರುವ್ಯಾಖ್ಯಾನಿಸುವ ಅವಶ್ಯಕತೆಯಿದೆ. ಈ ಹೊತ್ತು ದಲಿತ ಎಂದರೆ, ನಾವು ಲೋಕವನ್ನು ನೋಡುವ ದೃಷ್ಟಿಕೋನ. ದಲಿತ ಅನುಭಾವವೆಂದರೆ, ಕೇವಲ ದೈವಾರಾಧನೆ ಮಾತ್ರವಲ್ಲ, ಅವರ ಬದುಕಿನ ಕಣ್ಣಿನಿಂದ ಲೋಕ ಸಮಸ್ತವನ್ನು ಸಮಗ್ರವಾಗಿ ಕಾಣುವ ಜೀವನಕ್ರಮ. ದಲಿತ ಚಳವಳಿ ಅನುಭವದ ನೆಲೆಯಿಂದ ಅನುಭಾವದ ನೆಲೆಗೆ ತಲುಪಬೇಕಿದೆ ಎಂದು ವಿಮರ್ಶಕ ಡಾ. ರವಿಕುಮಾರ್ ನೀಹ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಮಂಗಳವಾರ ಆಯೋಜಿಸಿದ್ದ ‘ದಲಿತ ಸಾಹಿತ್ಯ: ಅನುಭವ ಮತ್ತು ಅನುಭಾವ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸಿವು ಮತ್ತು ಅಪಮಾನಗಳಿಲ್ಲದೇ ಹೋಗಿದ್ದರೆ ದಲಿತ ಸಾಹಿತ್ಯ ಹುಟ್ಟುತ್ತಲೇ ಇರಲಿಲ್ಲ. ಇದರ ಅನುಭಾವದ ಪರಿ ಬೇರೆ. ಅದು ದಲಿತರ ಬದುಕಿನ ಒಳಗಿಂದಲೇ ಹುಟ್ಟಿದ್ದು. ಹೀಗಾಗಿಯೇ ದಲಿತರಿಗೆ ದೇವರನ್ನು ಹೊರಗೆ ಹುಡುಕುವ ಅವಶ್ಯಕತೆ ಬರಲಿಲ್ಲ. ಸಕಲ ಚರಾಚರವನ್ನು ಒಳಗೊಳ್ಳುವ ಮೂಲಕ ಜಗತ್ತು ಕೇವಲ ಮನುಷ್ಯ ಕೇಂದ್ರಿತವಲ್ಲ ಎಂಬುದನ್ನು ದಲಿತ ಸಾಹಿತ್ಯ ಪ್ರತಿಫಲಿಸಿದೆ. ದಲಿತ ಸಾಹಿತ್ಯವೆಂದರೆ ಎಲ್ಲರನ್ನೂ ಒಳಗೊಂಡು ಜೊತೆಜೊತೆಯಾಗಿ ಸಾಗುವ ಹಂಬಲ ಎಂದು ವಿಶ್ಲೇಷಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಡಾ. ರವಿಕುಮಾರ್ ನೀಹ ಅವರನ್ನು ಕನ್ನಡ ವಿಭಾಗದ ವತಿಯಿಂದ ಗೌರವಿಸಲಾಯಿತು. ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಪ್ರಾಧ್ಯಾಪಕಿ ಪ್ರೊ. ಅಣ್ಣಮ್ಮ, ಸಹ ಪ್ರಾಧ್ಯಾಪಕಿ ಡಾ. ಗೀತಾ ವಸಂತ ಹಾಜರಿದ್ದರು.