ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಾಕಿ ಇರುವ ಇಕೆಐಸಿ ಸೇವಾ ಶುಲ್ಕ ನೀಡಬೇಕು, ಎಲ್ಲಾ ಸಗಟು ದಾಸ್ತಾನು ಮಳಿಗೆಗೆ ಸಿಸಿ ಕ್ಯಾಮರ ಅಳವಡಿಕೆ ಮಾಡಬೇಕು. ರಾಜ್ಯ ಸರ್ಕಾರ ಪಡಿತರದ ಬದಲು ಹಣ ನೀಡುವುದನ್ನು ನಿಲ್ಲಿಸಿ ಆಹಾರ ಪದಾರ್ಥಗಳನ್ನು ವಿತರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಒತ್ತಾಯಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿ ನೀಡಲು ಬಯಸಿದ್ದ ಹೆಚ್ಚುವರಿ ಐದು ಕೆ.ಜಿ.ಅಕ್ಕಿ ದೊರೆಯದ ಕಾರಣ ಹಣ ನೀಡುತ್ತಿದೆ. ಹಣ ನೀಡುವ ಬದಲು ಬೇಳೆ, ಸಕ್ಕರೆ, ಉಪ್ಪು ಇನ್ನಿತರ ಪದಾರ್ಥಗಳನ್ನು ನೀಡುವುದರಿಂದ ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುತ್ತಿರುವ ಐದು ಕೆ.ಜಿ.ಅಕ್ಕಿ ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆಯಡಿ ನೀಡುತ್ತಿರುವ ಅಕ್ಕಿಯಾಗಿದೆ. ರಾಜ್ಯ ಸರ್ಕಾರ ಅಕ್ಕಿಯ ಬದಲಾಗಿ ನೀಡುವ ಹಣವೂ ಸಹ ಕಳೆದ ನಾಲ್ಕು ತಿಂಗಳಿನಿಂದ ಪಡಿತರ ಚೀಟಿದಾರರ ಖಾತೆಗೆ ವರ್ಗಾವಣೆ ಆಗಿಲ್ಲ. ಹಾಗಾಗಿ ಈ ಹಿಂದೆ ನೀಡಿದಂತೆ ಪಡಿತರದಾರರಿಗೆ ಬೇಳೆ, ಸಕ್ಕರೆ, ಉಪ್ಪು ಇನ್ನಿತರ ಸಾಮಾನುಗಳನ್ನು ವಿತರಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಆಹಾರ ಪದಾರ್ಥಗಳ ಎತತುವಳಿ ವೇಳೆ ಗೋಡನ್ ಗಳಲ್ಲಿ ಪಡಿತರ ಆಹಾರ ವಿತರಕರಿಗೆ ಆಗುತ್ತಿರುವ ಮೋಸವನ್ನು ಸರಿಪಡಿಸಲು ಎಲ್ಲಾ ಗೋಡನ್ ಗಳಿಗೆ ಸಿಸಿಟಿವಿ ಅಳವಡಿಕೆ ಮತ್ತು ಬಯೋ ಮೆಟ್ರಿಕ್ ಯಂತ್ರ ಅಳವಡಿಸುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಮೂಲಕ ಹಸಿರು ಕಾರ್ಡು, ಅಂತ್ಯೋದಯ ಸೇರಿ ಒಟ್ಟು 1.28 ಕೋಟಿ ಪಡಿತರ ಕಾರ್ಡುಗಳಿದ್ದು, ಇವುಗಳಲ್ಲಿ ಸುಮಾರು 35ಲಕ್ಷ ಕಾರ್ಡುಗಳಿಗೆ ದಾಖಲೆಗಳೇ ಇಲ್ಲ. ಹಾಗಾಗಿ ಇಕೆವೈಸಿ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಇಂತಹ ಕಾರ್ಡುಗಳಿಗೆ ಅಹಾರ ಹಂಚಿಕೆಯಾಗುತ್ತಿರುವುದನ್ನು ಬಿಟ್ಟರೆ ಡಿಬಿಟಿ ಮೂಲಕ ಹಣ ವರ್ಗಾವಣೆ ಅಸಾಧ್ಯ. ಇದನ್ನು ಸರ್ಕಾ ಮನಗಾಣಬೇಕು ಎಂದರು.
ನಮ್ಮ ಸಂಘದಿಂದ ಸಹ ಕರ್ನಾಟಕ ಸರ್ಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ವಿತರಿಸಲು ಹೆಚ್ಚುವರಿ ಅಕ್ಕಿ ನೀಡುವಂತೆ ಹಿಂದಿನ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.ಆದರೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದರು.
ಈಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಚನ್ನಕೇಶವೇಗೌಡ, ಉಪಾಧ್ಯಕ್ಷರಾದ ಕೆ.ಎಲ್.ರಾಮಚಂದ್ರ, ಕೆ.ಬಿ.ಉಮೇಶಚಂದ್ರ, ಜಿಲ್ಲಾಧ್ಯಕ್ಷ ನಟರಾಜ್, ಚಿ.ನಾಹಳ್ಳಿ ತಾಲೂಕು ಅಧ್ಯಕ್ಷ ಬೀರಲಿಂಗಯ್ಯ, ಪಾವಗಡ ತಾಲೂಕು ಅಧ್ಯಕ್ಷ ಕೆ.ನಾಗರಾಜು, ಕಾರ್ಯದರ್ಶಿ ಪಿ.ಆರ್.ವಿ.ಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.