ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಪಕ್ಷದ ಮುಖಂಡರ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಪ್ರಚೋದನಾಕಾರಿ ಹೇಳಿಕೆ ನೀಡಿರುವ ಈಶ್ವರಪ್ಪ ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಚಿವ ಈಶ್ವರಪ್ಪ ಕಾಂಗ್ರೆಸ್ ಮುಖಂಡರನ್ನು ಕೀಳುಮಟ್ಟದ ಪದಗಳಿಂದ ನಿಂದಿಸಿದ್ದಾರೆ. ಇದು ಅವರ ಸ್ಥಾನಕ್ಕೆ ತಕ್ಕುದಾದುದಲ್ಲ. ಈಶ್ವರಪ್ಪ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು.
ಹಿರಿಯ ಸಚಿವರಿಗೆ ಮಾತಿನ ಮೇಲೆ ಹಿಡಿತವಿಲ್ಲ. ಹುಚ್ಚರಂತೆ ವರ್ತಿಸುತ್ತಿದ್ದು, ಹುಚ್ಚಾಸ್ಪತ್ರೆಗೆ ದಾಖಲಿಸಿ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಸಚಿವ ಈಶ್ವರಪ್ಪ ಇಂಥ ಹೇಳಿಕೆ ನೀಡುತ್ತಿರುವುದು ಇದು ಮೊದಲನೇಲ್ಲ. ಮಹಿಳಾ ಮಾಧ್ಯಮ ಪ್ತತಿನಿಧಿ ಒಬ್ಬರ ಮೇಲೂ ಹೀಗೆ ಮಾತನಾಡಿದ್ದರು. ಈಗ ಮತ್ತೆ ಅದೇ ಕೆಟ್ಟ ಚಾಳಿ ಮುಂದುವರಿಸಿದ್ದಾರೆ ಎಂದು ಟೀಕಿಸಿದರು.
ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಯಾವುದೇ ರಾಗ, ದ್ವೇಷವಿಲ್ಲದೆ ನಿಷ್ಪಕ್ಷಪಾತವಾಗಿ ಆಡಳಿತ ನೀಡುತ್ತೇವೆ ಎಂದು ಪ್ರಮಾಣ ಮಾಡುತ್ತಾರೆ. ಆದರೆ ಈಗ ಅಂಥವರೇ ಪ್ರಚೋದನಕಾರಿ ಹೇಳಿಕೆ ಕೊಡುತ್ತಾರೆ. ನಮ್ಮ ಕಾರ್ಯಕರ್ತರಿಗೆ ಒಂದು ಹೊಡೆದರೆ ಅವರ ಕಾರ್ಯಕರ್ತರಿಗೆ ನಾಲ್ವರಿಗೆ ಹೊಡೆಯಿರಿ, ತಲೆ ತೆಗೆಯಿರಿ ಎಂದು ಈಶ್ವರಪ್ಪ ಕಾರ್ಯಕರ್ತರಿಗೆ ಕರೆ ನೀಡುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವವರೇ ತಾವು ಮಾಡಿದ ಪ್ರಮಾಣವನ್ನು ಉಲ್ಲಂಘಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಇವರನ್ನು ಸಂಪುಟದಿಂದ ವಜಾಮಾಡಬೇಕು. ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಈಶ್ವರಪ್ಪ ಅವರಿಗೆ ರಕ್ಷಣೆ ನೀಡಿದರೆ ಮುಂದಿನ ದುಪ್ಷರಿಣಾಮವನ್ನು ಸರ್ಕಾರವೇ ಹೊರಬೇಕಾಗುತ್ತದೆ ಎಂದು ಖಂಡ್ರೆ ಎಚ್ಚರಿಕೆ ನೀಡಿದರು.
ಬಿಜೆಪಿ ಸಚಿವರು ಭ್ರಷ್ಟರು, ದುಷ್ಟರು. ಪ್ರಧಾನಿ ನರೇಂದ್ರ ಮೋದಿ ತಾನು ತಿನ್ನುವುದಿಲ್ಲ. ತಿನ್ನಲೂ ಬಿಡುವುದಿಲ್ಲ ಎಂದು ಹೇಳಿದ್ದರು. ಈಗ ತನ್ನದೇ ಪಕ್ಷದ ಮಂತ್ರಿಗಳನ್ನು ತಿನ್ನಲು ಬಿಟ್ಟಿದ್ದಾರೆ. ರಾಜ್ಯದ ಜನ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಭ್ರಷ್ಟರನ್ನು ಈಶ್ವರಪ್ಪ ಸಮರ್ಥಿಸಿಕೊಳ್ಳುತ್ತಿದ್ದು ಇದು ಆ ಪಕ್ಷದ ಧೋರಣೆಯನ್ನು ತೋರಿಸುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.
ಇಂದಿರಾ ಅಂದರೆ ಬಿಜೆಪಿಗೆ ಭಯ:
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರು ಕೇಳಿದರೆ ಬಿಜೆಪಿಗೆ ಭಯ. ಗಾಂಧಿ ಕುಟುಂಬ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಇಂದಿರಾ ಗಾಂಧಿ ಬಡವರ ತಾಯಿ. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಬಿಜೆಪಿ ಮುಂದಾಗಿದೆ. ರಾಜೀವ್ ಮತ್ತು ಇಂದಿರಾ ಅವರು ರಾಜ್ಯ ಮತ್ತು ರಾಷ್ಟ್ರಕ್ಕೆ ತಮ್ಮದೇ ಆದರೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ದೇಶದ ಏಕತೆ ಮತ್ತು ಅಖಂಡತೆಗೆ ತ್ಯಾಗ ಬಲಿದಾನ ಮಾಡಿದ್ದಾರೆ. ಇದನ್ನು ಸಹಿಸದ ಬಿಜೆಪಿ ಯೋಜನೆಗಳ ಹೆಸರನ್ನು ಬದಲಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.