ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಸ್ಥಳೀಯ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುವುದು ನಿಲ್ಲಿಸದಿದ್ದರೆ ಪ್ರತಿ ಗಾಮಪಂಚಾಯಿತಿಗಳ ಮುಂದೆ ಉಗ್ರ ಹೋರಾಟದ ನಡೆಸಲಾಗುವುದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ನಡೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತಿಗಳು ಸ್ಥಳೀಯ ಸ್ವಯಂ ಸರ್ಕಾರಗಳೇ ಎಂಬುದನ್ನು ಸ್ಪಷ್ಟಪಡಿಸದಿರುವ ಹಾಗೂ ಗ್ರಾಮ ಪಂಚಾಯತಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಅಕ್ಟೋಬರ್ 31ರಂದು ಪತ್ರ ನೀಡಿದ್ದರೂ ಇದುವರೆವಿಗೂ ಒಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಉತ್ತರ ನೀಡಿಲ್ಲ. ಧರಣಿ ನಡೆಸುವುದಾಗಿ ಪತ್ರ ನೀಡಿದರೂ ನಮ್ಮ ಜೊತೆ ಸಿಇಓ ಮಾತುಕತೆ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಗ್ರಾಮಪಂಚಾಯತಿಗಳನ್ನು ಸ್ಥಳೀಯ ಸ್ವಯಂ ಸರ್ಕಾರಗಳೆಂದು ಭಾವಿಸಿಲ್ಲ. ತಮ್ಮ ಶಾಖಾ ಕಛೇರಿಗಳೆಂದು ಪರಿಭಾವಿಸಿ ತಮಗೆ ಬೇಕಾದ ಹಾಗೆ ಆದೇಶಗಳನ್ನು ಮಾಡುತ್ತಾ, ತಮ್ಮ ನೇರ ನಿಯಂತ್ರಣದಲ್ಲಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ, ತಮ್ಮಿಚ್ಛೆಯ ಕಾರ್ಯಕ್ರಮಗಳನ್ನು, ಪ್ರಜಾಸತ್ತಾತ್ಮಕವಾಗಿ ಗ್ರಾಮ ಸಭೆಗಳಲ್ಲಿ ಚರ್ಚಿಸದೆ, ಜನರಿಂದ ಆಯ್ಕೆಯಾದ ಗ್ರಾಮ ಪಂಚಾಯತಿಗಳ ಸಭೆಯಲ್ಲಿ ಚರ್ಚಿಸದೆ, ಗ್ರಾಮಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಿ ನೇರವಾಗಿ ತಮ್ಮ ಆದೇಶಗಳನ್ನು ಅನುಷ್ಠಾನಗೊಳಿಸುವಂತೆ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಆರೋಪಿಸಿದರು.
ಸಿಇಒ ಉದ್ಯೋಗಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳು ಗ್ರಾಮಸಭೆಗಳ ಮೂಲಕ ರೂಪಿಸಿದ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಧಿಕ್ಕರಿಸಿ, ತಾವು ಗ್ರಾಮಪಂಚಾಯತಿ ಅಧಿಕಾರಿಗಳು ಮತ್ತು ನೌಕರರ ಮೂಲಕ ಕೇವಲ ಉದಿಬದ ಕಾಮಗಾರಿಗಳ ಯೋಜನೆ ರೂಪಿಸಿ ಅದನ್ನೇ ಅನುಷ್ಠಾನ ಮಾಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅನುಷ್ಠಾನಗೊಳಿಸುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಕಾರ್ಯದರ್ಶಿ ಚಲಪತಿ, ಜಿಲ್ಲಾ ಗ್ರಾಮ ಪಂಚಾಯತಿ ಸದಸ್ಯರ ಜಿಲ್ಲಾಧ್ಯಕ್ಷ ವಿಜಯಪ್ರಕಾಶ್ ದೊಡ್ಡೇರಿ, ಮುಳಬಾಗಿಲು ತಾಲ್ಲೂಕು ಗ್ರಾ.ಪಂ. ಅಧ್ಯಕ್ಷ ಶಂಕರ್ ಇತರರು ಇದ್ದರು.