ಬೆಂಗಳೂರಿನ 48 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದ್ದು ಬಾಂಬ್ ನಿಷ್ಕ್ರಿಯಾ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೋಷಕರು ಆತಂಕಗೊಂಡಿದ್ದಾರೆ.
ಬೆಂಗಳೂರಿನ ಉತ್ತರ ವಲಯ-4ರಲ್ಲಿ 1ಶಾಲೆಗೆ, ಬೆಂಗಳೂರಿನ ದಕ್ಷಿಣ ವಲಯ-1ರಲ್ಲಿ 15 ಶಾಲೆಗಳಿಗೆ, ಬೆಂಗಳೂರಿನ ಉತ್ತರ ವಲಯ-1ರಲ್ಲಿ 4 ಶಾಲೆಗಳಿಗೆ, ಬೆಂಗಳೂರಿನ ದಕ್ಷಿಣ ವಲಯ-2ರಲ್ಲಿ 3 ಶಾಲೆಗಳಿಗೆ, ಬನ್ನೇರುಘಟ್ಟದ 7 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನೀವ್ ಶಾಲೆ ಸದಾಶಿವನಗರ, ಕಾರ್ಮಲ್ ಶಾಲೆ ಬಸವೇಶ್ವರ ನಗರ, ವಿದ್ಯಾಶಿಲ್ಪ ಶಾಲೆ ಬಸವೇಶ್ವರ ನಗರ, ನ್ಯಾಷನಲ್ ಅಕಾಡೆಮಿ ಬಸವೇಶ್ವರ ನಗರ, ನ್ಯಾಷನಲ್ ಶಾಲೆ ಬಸವೇಶ್ವೇರ ನಗರ, ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ಬನ್ನೇರುಘಟ್ಟ, ಗ್ರೀನ್ ಹುಡ್ ಹೈಸ್ಕೂಲ್ ಬನ್ನೇರು ಘಟ್ಟ, ಎಬಿನೇಜರ್ ಸಿಂಗೇನಾ ಅಗ್ರಹಾರ, ಇನ್ವೆಂಚರ್ ಇಂಟರ್ ನ್ಯಾಷನಲ್ ಸ್ಕೂಲ್ ಬೊಮ್ಮಸಂದ್ರ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಶ್ರೀವಾಣಿ ಸ್ಕೂಲ್ ಬಸವೇಶ್ವರ ನಗರ, ಚಿತ್ರಕೂಟ ಶಾಲೆ ಕೆಂಗೇರಿ, ಇಂಡಿಯನ್ ಹೈಸ್ಕೂಲ್ ಬಸವೇಶ್ವರ ನಗರ, ಅಚೀವರ್ಸ್ ಅಕಾಡೆಮಿ ಆನೇಕಲ್ , ಸೆಂಟ್ ಜಾನ್ ಶಾಲೆ ಭಾರತೀನಗರ, ನ್ಯೂ ಅಕಾಡೆಮಿ ಸ್ಕೂಲ್ ಕೆಂಪಾಪುರ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ, ಅಲ್ ಬಷೀರ್ ಸ್ಕೂಲ್ ಬನ್ನೇರುಘಟ್ಟ, ದೀಕ್ಷಾ ಹೈಸ್ಕೂಲ್ ಬನ್ನೇರುಘಟ್ಟ ಶಾಲೆಗಳಿಗೂ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.
ಬಾಂಬ್ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಪೋಷಕರು ಶಾಲೆಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳನ್ನು ಮನೆಗಳಿಗೆ ಕರೆದೊಯ್ದಿದ್ದಾರೆ. ಬಾಂಬ್ ಸಂದೇಶ ರವಾನೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ರವಾನೆಯಾಗಿರುವ ಹಿನ್ನೆಲೆಯಲ್ಲಿ ಕೊರಟಗೆರೆಯಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.