ಬ್ರಿಟೀಷರಿಂದ ನಾವು ರಕ್ಷಣೆ ಮಾಡಿರುವ ದೇಶವನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಕಾಂಗ್ರೆಸ್ ಕರೆ ನೀಡಿದೆ.
ದೇಶದ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ‘ಕ್ವಿಟ್ ಇಂಡಿಯಾ’ ಚಳುವಳಿ 75 ವರ್ಷಗಳು ಪೂರೈಸಿರುವ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ನಾವೆಲ್ಲರೂ ಸ್ವಾತಂತ್ರ್ಯದ ಫಲಾನುಭವಿಗಳು. ನಮಗೆ 60 ತಿಂಗಳು ಅಧಿಕಾರ ಕೊಡಿ. ದೇಶದ ಸ್ವರೂಪವನ್ನೇ ಬದಲಿಸುತ್ತೇವೆ ಎಂದು ಜನರಿಗೆ ಮೋದಿ 2014ರಲ್ಲಿ ಮನವಿ ಮಾಡಿದ್ದರು. ಅಧಿಕಾರ ಕೊಟ್ಟ ನಂತರ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯತ್ತ ಸಾಗಿದೆ. ಸಾಮಾಜಿಕ ಸನ್ನಿವೇಶ ಬಿಗಡಾಯಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಬಿಜೆಪಿಯ 7 ವರ್ಷಗಳ ಅವಧಿಯಲ್ಲಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ಎತ್ತುವ ಬದಲು, ಶೇ.23ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. 12 ಕೋಟಿ ಉದ್ಯೋಗ ನಷ್ಟ, ನಿರುದ್ಯೋಗ ಪ್ರಮಾಣ ಹೆಚ್ಚಳ. ದೇಶದ ಜಿಡಿಪಿ ಮೈನಸ್ 7.7%ಗೆ ಇಳಿದಿದೆ. ಇದು ದೇಶಕ್ಕೆ ಮೋದಿ ಅವರ ಕೊಡುಗೆ. ದೇಶದಲ್ಲಿ ಜನರ ಬದುಕಿನ ಪರಿಸ್ಥಿತಿ ಹೇಳಲಾರದಷ್ಟು ಹೀನಾಯವಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದನಂತರ ಜನರ ಜೀವನ ವೆಚ್ಚ ದುಪ್ಪಟ್ಟಾಗಿದೆ. ಮೋದಿ ಸುಳ್ಳು ಹೇಳಿರುವುದು ಬಿಟ್ಟರೆ ಸಾಧನೆ ಮಾತ್ರ ಶೂನ್ಯ. ಸ್ವತಂತ್ರ್ಯ ಭಾರತದಲ್ಲಿ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಬೇರೊಬ್ಬರಿಲ್ಲ. ಸಾವರ್ಕರ್ ಹಾದಿಯಾಗಿ ಬಿಜೆಪಿಯ ಯಾವ ನಾಯಕರೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಅವರಿಗೆ ಈಗಲೂ ನಂಬಿಕೆ ಇರುವುದು ಮೇಲು, ಕೀಳು, ತಾರತಮ್ಯದ ವ್ಯವಸ್ಥೆ ಮೇಲೆ. ಅದಕ್ಕಾಗಿ ಜನರ ನಡುವಿನ ಸಾಮರಸ್ಯವನ್ನು ಛಿದ್ರ ಮಾಡಿ ಸಮಾಜವನ್ನು ತಮ್ಮ ಕಪಿಮುಷ್ಛಿಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಾನು ಟಿಪ್ಪು ಸುಲ್ತಾನ್ ಜಯಂತಿ ಮಾಡಿದಾಗ ನನ್ನನ್ನು ಹಿಂದು ವಿರೋಧಿ ಎಂದು ಬಿಂಬಿಸಿದರು. ಟಿಪ್ಪು ರಾಜ್ಯದಲ್ಲಿ ದಿವಾನರಾಗಿದ್ದವರು ಯಾರು? ಅವರು ಯಾವ ಜಾತಿಗೆ ಸೇರಿದವರು? ಟಿಪ್ಪು ಆಡಳಿತದಲ್ಲಿ ಹಣಕಾಸು ಜವಾಬ್ದಾರಿ ನಿಭಾಯಿಸಿದ್ದ ಕೃಷ್ಣಸ್ವಾಮಿ ಅವರು ಯಾವ ಜಾತಿಗೆ ಸೇರಿದವರು?
ಮೊಘಲರ 600 ವರ್ಷಗಳ ಆಳ್ವಿಕೆ ಕಾಲದ ಅಷ್ಟೂ ಸಮಯದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರೇ. ಟಿಪ್ಪು ಆಡಳಿತ ಅವಧಿಯಲ್ಲಿ ನಾಲ್ಕು ಯುದ್ಧಗಳು ನಡೆದವು, ಅದು ಬ್ರಿಟೀಷರ ವಿರುದ್ಧವಾಗಿತ್ತು. ಟಿಪ್ಪು ಯಾವ ದೇಶದ್ರೋಹ ಮಾಡಿದ್ದ ಅಂತಾ ಯಾರಾದರೂ ಹೇಳುತ್ತಾರಾ? ಇಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ವ್ಯಕ್ತಿ ಜಯಂತಿ ಮಾಡಿದರೆ ನಿಮಗ್ಯಾಕೆ ಕೋಪ? ಬಿಜೆಪಿಯವರಿಗೆ ಪೂರ್ಣಯ್ಯ ಅವರ ಮೇಲೆ ಕೋಪ ಇಲ್ಲ, ಹೇಗಿದೆ ನೋಡಿ ಬಿಜೆಪಿಯ ದ್ವಂಧ್ವ ನೀತಿ. ಬಿಜೆಪಿಗರು ಎಂತಹ ನೀಚರು ಎಂದು ಸಾಬೀತಾಗುತ್ತದೆ’ ಎಂದರು.
ಈಸ್ಟ್ ಇಂಡಿಯಾ ಕಂಪನಿ ದೇಶದ ಸಂಪತ್ತು ಲೂಟಿ ಮಾಡಿತು. ದೇಶವನ್ನು ಬಡರಾಷ್ಟ್ರವನ್ನಾಗಿ ಮಾಡಿತು. ಶ್ರೀಮಂತ ದೇಶವಾಗಿದ್ದ ಭಾರತ, ಬಡ ರಾಷ್ಟ್ರವಾಗಲು ಬ್ರಿಟೀಷರೇ ಕಾರಣ. ಇಂದು ದೇಶ ಮತ್ತೆ ಬಡರಾಷ್ಟ್ರವಾಗುತ್ತಿರುವುದಕ್ಕೆ ಬಿಜೆಪಿ ಕಾರಣ. ಹಾಗಾಗಿ ದೇಶ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಚಿವರಾದ ಆರ್.ವಿ ದೇಶಪಾಂಡೆ, ಮೋಟಮ್ಮ, ಉಮಾಶ್ರೀ, ಮಾಜಿ ಸಂಸದ ಹಾಗೂ ಹಿರಿಯ ನಾಯಕ ಹನುಮಂತಯ್ಯ, ಮೇಲ್ಮನೆ ಸದಸ್ಯರಾದ ಬಿ.ಕೆ ಹರಿಪ್ರಸಾದ್, ನಜೀರ್ ಅಹ್ಮದ್ ಮೊದಲಾದವರು ಇದ್ದರು.