ರಾಜ್ಯದಲ್ಲಿ ಕೊರೊನ ಸೋಂಕು ಹೆಚ್ಚುತ್ತಿದೆ. ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ನೂತನ ಸಚಿವರು ತಮಗೆ ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಹಾರತುರಾಯಿ ಹಾಕಿಸಿಕೊಂಡು ಅದ್ದೂರಿ ಉತ್ಸವಗಳನ್ನು ಆಚರಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ನೂತನ ಸಚಿವರ ನಡವಳಿಕೆಯಿಂದ ಜನರು ನಾಚಿಕೆಪಡುತ್ತಿದ್ದಾರೆ. ಮರುಗುತ್ತಿದ್ದಾರೆ. ಮುಖ್ಯಮಂತ್ರಿ ಬದಲಾದರೂ ಸರ್ಕಾರ ಮತ್ತು ಅದರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ತನ್ನ ಇಮೇಜ್ ಬದಲಿಸಿಕೊಳ್ಲಲು ಮುಖ್ಯಮಂತ್ರಿಯನ್ನೇನೋ ಬದಲಿಸಿತು. ಆದರೆ ಹಿಂದಿನ ಸರ್ಕಾರದ ಮಂತ್ರಿಮಂಡಲವನ್ನುಏ ಬೊಮ್ಮಾಯಿ ಅವರಿಗೆ ನೀಡಿತು. ಅದೇ ಹಳೇ ಸಚಿವರು ಹೊಸದಾಗಿ ಪ್ರಮಾಣ ಸ್ವೀಕರಿಸಿ ತಮ್ಮ ಅದೇ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ. ಇವರಿಗೆ ಜನರ ಸಂಕಷ್ಟ ಪರಿಹಾರವಾಗಬೇಕಿಲ್ಲ. ವಿಜಯೋತ್ಸವಗಳು, ಸನ್ಮಾನಗಳು ಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಸಂಪುಟದ ಸಚಿವರಿಗೆ ಉಸ್ತುವಾರಿ ಜಿಲ್ಲೆಗಳನ್ನು ವಹಿಸಿದ್ದರೂ ಅಲ್ಲಿನ ಪ್ರವಾಹ ಪರಿಸ್ಥಿತಿ, ಕೋವಿಡ್ ಸ್ಥಿತಿಗಳ ನಿರ್ವಹಣೆ ಮಾಡುವಂತೆ ಸೂಚಿಸಿದ್ದರು. ಸಿಎಂ ಬೊಮ್ಮಾಯಿ ಅವರು ಸದಾಶಯದಿಂದ ಜವಾಬ್ದಾರಿ ನೀಡಿದರೆ ಜವಾಬ್ದಾರಿ ಮರೆತ ಸಚಿವರು ತಮಗೆ ನಿಗದಿಪಡಿಸಿದ ಜಿಲ್ಲೆಗಳಲ್ಲಿ ವಿಜಯೋತ್ಸವ ಆಚರಿಸುತ್ತಿರುವುದು ಸರಿಯಲ್ಲ ಎಂದ ವಾಗ್ದಾಳಿ ನಡೆಸಿದ್ದಾರೆ.
ಮೂರನೇ ಅಲೆಯೊಂದು ಬಾಗಿಲ ಬಳಿಯಲ್ಲೇ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪೂರಕವೆಂಬಂತೆ ಕೋವಿಡ್ ಪ್ರಕರಣಗಳು ಏರುತ್ತಿವೆ. ಇಂತಹ ಸಂದರ್ಭದಲ್ಲಿ ಮಂತ್ರಿಕೂಟಕ್ಕೆ ಅರಿವಾಗಲಿ ಎಂದು ಹೇಳಿದ್ದಾರೆ.