ಶೆಟ್ಟರ್ ಅವರಂತಹ ಹಿರಿಯ ನಾಯಕರಿಗೆ ಬಿಜೆಪಿ ಯಾಕೆ ಟಿಕೆಟ್ ನೀಡಲಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಶೆಟ್ಟರ್ ಅವರು ರಾಜ್ಯದಲ್ಲಿ ಅವರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅವರು ತಮ್ಮ ಭಾಷಣದಲ್ಲಿ ತಮಗೆ ಯಾಕೆ ಟಿಕೆಟ್ ಸಿಕ್ಕಲ್ಲ ಎಂದು ಕಾರಣವನ್ನು ಹೇಳಿದರು. ಅದೇನೆಂದರೆ ಅವರ ವಿರುದ್ಧ ಯಾವುದೇ ಟೇಪ್ ಆಗಲಿ, ಭ್ರಷ್ಟಾಚಾರ ಪ್ರಕರಣವಾಗಲಿ ಇಲ್ಲ. ಅವರು ಭ್ರಷ್ಟಾಚಾರ ಮಾಡದ ಕಾರಣ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಶೆಟ್ಟರ್ ಅವರು 40% ಕಮಿಷನ್ ತಿಂದಿಲ್ಲ ಹೀಗಾಗಿ ಸರ್ಕಾರದಲ್ಲಿ ಮಂತ್ರಿಯೂ ಆಗಲಿಲ್ಲ, ಚುನಾವಣೆಯಲ್ಲಿ ಟಿಕೆಟ್ ಕೂಡ ಸಿಗಲಿಲ್ಲ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ
ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುವಾಗ ಕರ್ನಾಟಕ ರಾಜ್ಯದ 40% ಕಣಿಷನ್ ಭ್ರಷ್ಟಾಚಾರ ಮಾಡುವ ನಾಲ್ಕೈದು ನಾಯಕರು ಅವರ ಸುತ್ತ ಇರುತ್ತಾರೆ. ಮೋದಿ ಅವರು ತಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದ್ದರು, ಆದರೆ ಅವರು ಯಾರು ಭ್ರಷ್ಟರಲ್ಲವೋ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಆಮೂಲಕ ಅವರು ಭ್ರಷ್ಟಾಚಾರಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಹಾನಗಲ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಗದಗದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅವರು ಬಿಜೆಪಿ ಸರ್ಕಾರ ವಿನಾಯತಿ ನೀಡಿ, 40% ಬದಲು 30% ಕಮಿಷನ್ ಅನ್ನು ಮಠದಿಂದ ಪಡೆದಿರುವುದಾಗಿ ಹೇಳಿದ್ದಾರೆ. ಬಿಜೆಪಿ ಅವರು ಧರ್ಮದ ವಿಚಾರವಾಗಿ ಮಾತನಾಡುತ್ತಾರೆ, ಭ್ರಷ್ಟಾಚಾರದಲ್ಲಿ ವಿನಾಯತಿ ನೀಡುತ್ತಾರೆ. ಉಳಿದ ರಾಜ್ಯದ ಜನರಿಂದ 40% ಪಡೆಯುತ್ತಾರೆ. ಅದು ಸಣ್ಣದಾಗಲಿ, ದೊಡ್ಡ ಕೆಲಸವಾಗಲಿ 40% ನೀಡಲೇಬೇಕು ಎಂದು ಆರೋಪಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದು ಕರ್ನಾಟಕದಲ್ಲಿ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ದೂರು ನೀಡಿದರು. ಪ್ರಧಾನಮಂತ್ರಿಗಳು ಈ ದೂರಿಗೆ ಉತ್ತರ ನೀಡುವುದಿರಲಿ, ಆ ಪತ್ರವನ್ನು ತೆಗೆದುಕೊಂಡಿಲ್ಲ. ಮೈಸೂರು ಸ್ಯಾಂಡಲ್ ಸೋಪ್ ಮಂಡಳಿಯಲ್ಲಿ ಶಾಸಕರ ಪುತ್ರ 8 ಕೋಟಿ ಹಣ ಪಡೆಯುತ್ತಾ ಸಿಕ್ಕಿ ಬೀಳುತ್ತಾನೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಒಬ್ಬರಿಂದ 70 ಲಕ್ಷ ಲಂಚ ಪಡೆಯಲಾಗಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಜೆಇಇ ನೇಮಕಾತಿ ಅಕ್ರಮ ನಡೆದಿದೆ. ಯಾವುದರಲ್ಲೇ ನೋಡಿದರು ಬಿಜೆಪಿ 40% ಸರ್ಕಾರ ತೆಗೆದುಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ, ಬಸವಣ್ಣನ ಪ್ರತಿಮೆ ಮುಂದೆ ಕೈ ಮುಗಿಯುತ್ತಾರೆ. ಆದರೆ ದೇಶದ ತುಂಬಾ ದ್ವೇಷವನ್ನು ಬಿತ್ತುತ್ತಾರೆ. ಜಾತಿ ಧರ್ಮಗಳ ನಡುವೆ ಜಗಳ ತಂದಿಡುತ್ತಾರೆ. ಆದರೆ ಬಸವಣ್ಣನವರು ಇದರ ವಿರುದ್ಧ ಹೋರಾಟ ಮಾಡಲು ಜೀವನವನ್ನೇ ಕಳೆದರು. ಇವರು ಒಂದೆರಡು ಉದ್ಯಮಿಗಳಿಗೆ ಸಂಪೂರ್ಣ ನೆರವು ನೀಡುತ್ತಿದ್ದು, ಸಣ್ಣ ಪುಟ್ಟ ವ್ಯಾಪಾರಸ್ಥರು ಕಣ್ಣೀರಾಕುತ್ತಿದ್ದರೂ ಬಿಜೆಪಿ ಸರ್ಕಾರಕ್ಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕಳೆದ ಐದು ವರ್ಷಗಳಿಂದ ಈ ಸರ್ಕಾರ ಪ್ರತಿ ಗುತ್ತಿಗೆಯಲ್ಲೂ 40% ಕಮಿಷನ್ ಪಡೆದಿದ್ದಾರೆ. ಹೀಗಾಗಿ ನಾವು ಕೆಲವು ಕಾರ್ಯಕ್ರಮ ನೀಡಲು ತೀರ್ಮಾನಿಸಿದ್ದೇವೆ. ನಾವು ಆರಂಭದಲ್ಲೇ ಸರ್ಕಾರ ಬಂದ ಸಚಿವ ಸಂಪುಟದಲ್ಲಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಿದರು.


