ಅದಾನಿ ವಿಚಾರವಾಗಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲು ಸಂಸತ್ ಭವನದಿಂದ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವಿರೋಧ ಪಕ್ಷಗಳ ನಾಯಕರನ್ನು ಬುಧವಾರ ದೆಹಲಿಯ ವಿಜಯ್ ಚೌಕ್ ನಲ್ಲಿ ಪೊಲೀಸರು ತಡೆದ ಪ್ರಸಂಗ ನಡೆಯಿತು.
ಪ್ರತಿಪಕ್ಷದ ನಾಯಕರನ್ನು ಏಜೆನ್ಸಿ ಕಚೇರಿಗೆ ತೆರಳದಂತೆ ತಡೆದ ನಂತರ ಅವರು ಸಂಸತ್ತಿನ ಸಂಕೀರ್ಣಕ್ಕೆ ಮರಳಿದರು.
ಸುಮಾರು 18 ಪಕ್ಷಗಳ ವಿರೋಧ ಪಕ್ಷದ ಸಂಸದರಿಗೆ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಈ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಿರುವುದರಿಂದ ವಿರೋಧ ಪಕ್ಷದ ಸಂಸದರು ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
18 ಪಕ್ಷಗಳ ವಿರೋಧ ಪಕ್ಷದ ಸಂಸದರು ಅದಾನಿ ವಿಷಯದ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಮನವಿ ನೀಡಲು ಬಯಸಿದ್ದರು. ಆದರೆ ಸರ್ಕಾರ ನಮಗೆ ಮೆರವಣಿಗೆ ಮಾಡಲು ಅವಕಾಶ ನೀಡಲಿಲ್ಲ ಮತ್ತು ಪೊಲೀಸರು ನಮ್ಮನ್ನು ವಿಜಯ್ ಚೌಕ್ ನಲ್ಲಿ ನಿಲ್ಲಿಸಿದರು ಎಂದು ಖರ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾವು ಅದಾನಿ ವಿಷಯದ ಬಗ್ಗೆ ವಿವರವಾದ ತನಿಖೆಗಾಗಿ ಜಾರಿ ನಿರ್ದೇಶನಾಲಯಕ್ಕೆ ನಮ್ಮ ಪ್ರಕರಣವನ್ನು ಪ್ರಸ್ತುತಪಡಿಸಲು ಬಯಸುತ್ತೇವೆ ಮತ್ತು ನಾವು ಮುಂದುವರಿಯಲು ಪ್ರಯತ್ನಿಸುತ್ತೇವೆ ಎಂದು ಖರ್ಗೆ ಹೇಳಿದರು.
ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಮಾತನಾಡಿ, ನಾವು ವಿರೋಧ ಪಕ್ಷಗಳ 200 ಸಂಸದರಾಗಿದ್ದು ಅದಾನಿ ಸಮಸ್ಯೆಯ ತನಿಖೆಗಾಘಿ ಮನವಿ ಪತ್ರವನ್ನು ಸಲ್ಲಿಸಲು ಇಡಿ ಕಚೇರಿಗೆ ಮೆರವಣಿಗೆ ಮಾಡಲು ಪ್ರಯತ್ನಿಸಿದೆವು. ಆದರೆ ಪೊಲೀಸರು ನಮ್ಮನ್ನು ಬಲವಂತವಾಗಿ ತಡೆದರು ಎಂದು ಆರೋಪಿಸಿದರು.
ನಾವು ಮತ್ತೆ ಸಂಸತ್ತಿಗೆ ಹೋಗುತ್ತಿದ್ದೇವೆ ಮತ್ತು ಸಂಸತ್ತಿನ ಭವನದೊಳಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಶಿವಸೇನೆ ನಾಯಕ ಸಂಜಯ್ ರಾವುತ್ ಮಾತನಾಡಿ, ನಾವು ಮುಂದೆ ಸಾಗಲು ಅಡ್ಡಿಯಾಗುವುದಿಲ್ಲ ಮತ್ತು ನಮ್ಮ ಪ್ರತಿಭಟನಾ ಮೆರವಣಿಗೆಯನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.