ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲು ಬಳಸುತ್ತಿದ್ದ ಕೊಲಿಜಿಯಂ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 9, ಗುರುವಾರದಂದು 12ನೇ ಆವೃತ್ತಿಯ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಕಾನೂನು ಅಧ್ಯಯನ ಏಕೆ, ಸಾಮಾಜಿಕ ಕರ್ತವ್ಯ ಮತ್ತು ಕಾನೂನು ಜವಾಬ್ದಾರಿ ಕುರಿತು ಅವರು ಮಾತನಾಡಿದರು.
ಕಾನೂನು ಅಧ್ಯಯನವು ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಸೀಮಿತವಾಗಿರಬಾರದು, ಆದರೆ ಜನಸಾಮಾನ್ಯರಿಗೆ ಮತ್ತು ಸಾಮಾಜಿಕ ಉಪಕರಣಗಳಿಗೆ ಮುಕ್ತವಾಗಿರಬೇಕು. ವಿದ್ಯಾರ್ಥಿಗಳು ಗ್ರಾಮೀಣ ಜನರೊಂದಿಗೆ ಕೆಲಸ ಮಾಡಬೇಕಾದ ಇಂಟರ್ನ್ ಶಿಪ್ ಗಳಿಗೆ ಒತ್ತು ನೀಡಬೇಕಾದ ಸಮಯ ಇದು. ಅವರೊಂದಿಗೆ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಮತ್ತು ಅವರು ಎದುರಿಸುತ್ತಿರುವ ಸವಾಲು ಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಲಲಿತ್ ತಿಳಿಸಿದರು.
ವೈದ್ಯಕೀಯ ವಿದ್ಯಾರ್ಥಿಗಳಂತೆ ಕಾನೂನು ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಇಂಟರ್ನ್ ಶಿಪ್ ಗಳನ್ನು ಜಾರಿಗೆ ತರಬೇಕು. ಇದರಿಂದ ಅವರು ಗ್ರಾಮೀಣ ಜನರೊಂದಿಗೆ ಆ ಪ್ರದೇಶದಲ್ಲಿ ಕೆಲಸ ಮಾಡಬಹುದು ಎಂದು ಒತ್ತಾಯಿಸಿದರು.
ಇದರಿಂದ ಗ್ರಾಮೀಣ ಪ್ರದೇಶದ ಜನರ ದೌರ್ಬಲ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ ಮತತು ಅವರನ್ನು ಸಂಪೂರ್ಣ ವೃತ್ತಿಪರರು ಮತ್ತು ಉತ್ತಮ ಮನುಷ್ಯರನ್ನಾಗಿ ಮಾಡುತ್ತದೆ ಎಂದು ಹೇಳಿದರು.
ಇಂತಹ ಇಂಟರ್ನ್ ಶಿಪ್ ಪ್ರಕ್ರಿಯೆಯು ಗ್ರಾಮೀಣ ಜನತೆಗೆ ಅವರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅವರಿಗೆ ಕಾನೂನು ಸಹಾಯವನ್ನು ಹೆಚ್ಚು ಸುಲಭವಾಗಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣದಂತಹ ಕೋರ್ಸ್ ಗಳಲ್ಲಿ ಒಬ್ಬ ವ್ಯಕ್ತಿಯು ಪದವಿ ಪಡೆದ ನಂತರ ವಿದ್ಯಾರ್ಥಿಯು ಗ್ರಾಮೀಣ ಪ್ರದೇಶದಲ್ಲಿ ಇಂಟರ್ನ್ ಶಿಪ್ ಆಗಿ ಸೇವೆ ಸಲ್ಲಿಸುವ ಮೂಲಕ ಅದನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ವಕೀಲ ವೃತ್ತಿಯಲ್ಲಿ ಏಕೆ ಮಾಡಬಾರದು? ಗ್ರಾಮೀಣ ಪ್ರದೇಶದ ಸೇವೆ ಏಕೆ ವಿಶೇಷವಾಗಿದೆ? ವೈದ್ಯಕೀಯ ವೃತ್ತಿಪರರು ಮಾತ್ರವೇ ಮಾಡಬೇಕೆ ಎಂದು ಪ್ರಶ್ನಿಸಿದರು.


