ಪ್ರಜಾತಾಂತ್ರಿಕ ಮೌಲ್ಯಗಳನ್ನು ರಕ್ಷಿಸಬೇಕಾದರೆ ಹೆಚ್ಚೆಚ್ಚು ಹೋರಾಟಗಳು ಬೆಳೆಯಬೇಕು. ಸಮಾಜದ ಆಮೂಲಾಗ್ರ ಬದಲಾವಣೆಯಲ್ಲಿ ಮಹಿಳಾಶಕ್ತಿಯ ಪಾತ್ರ ಮಹತ್ವದ್ದಾಗಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.
ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಮತ್ತು ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮತ್ತು ಭದ್ರತೆಯನ್ನು ಖಾತ್ರಿಪಡಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾವೇ ಆರಿಸಿ ಕಳಿಸಿದ ಜನಪ್ರತಿನಿಧಿಗಳ ನಿಷ್ಕಾಳಜಿ ಇಂದು ಎಲ್ಲೆಡೆ ಎದ್ದು ಕಾಣುತ್ತಿದೆ. ಸಾರ್ವಜನಿಕರ ಸೇವಕರು ಹಣವಂತರ ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ. ಜನ ಸಾಮಾನ್ಯರಿಗೆ ಪಡಿತರ, ಪಿಂಚಣಿ ಮೊದಲಾದ ಜೀವನ ಭದ್ರತೆಯನ್ನು ಒದಗಿಸುವ ಬದಲಿಗೆ ಇಂದಿನ ಸರ್ಕಾರಗಳು ಶ್ರೀಮಂತರಿಗೆ ತೆರಿಗೆ ವಿನಾಯಿತಿ, ಸಾಲಾ ಮನ್ನ ಮುಂತಾದ ಉಡುಗೊರೆಗಳನ್ನು ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಎಂಎಸ್ಎಸ್ ರಾಷ್ಟ್ರಾಧ್ಯಕ್ಷೆ ಡಾ.ಸುಧಾ ಕಾಮತ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೋಸ್ಕರ ಪ್ರಾಣತೆತ್ತ ಮಹನೀಯರು ದೇಶದ ಜನತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಮೊದಲಾದ ಮೂಲಸೌಕರ್ಯ ದೊರೆಯಬೇಕು ಎಂದು ಆಶಿಸಿದ್ದರು. ಆದರೆ ಇಂದು ಇದಕ್ಕೆ ವಿರುದ್ದವಾಗಿದೆ ಎಂದು ಕಿಡಿಕಾರಿದರು.
ದೇಶದ ಬಹುಪಾಲು ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಕ್ಷೇತ್ರದ ಖಾಸಗೀಕರಣ ವಿಪರೀತವಾಗಿದೆ. ಉಚಿತ ಆರೋಗ್ಯ ಸೌಲಭ್ಯಗಳಿಂದ ಬಡ ಮಹಿಳೆಯರು ವಂಚಿತರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಎಐಎಂಎಸ್ಎಸ್ ಕರ್ನಾಟಕ ರಾಜ್ಯಾಧ್ಯಕ್ಷೆ ಬಿ.ಆರ್.ಅಪರ್ಣ ಮಾತನಾಡಿ, ಯಾವುದೇ ವಯಸ್ಸಿನ ಬೇಧವಿಲ್ಲದೆ ಮಹಿಳೆಯರ ಮೇಲೆ ಅತ್ಯಾಚಾರಗಲು ನಡೆಯುತ್ತಿವೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರಿಗೆ ರಾಜಕೀಯ ಬೆಂಬಲ ಕೂಡ ಇದೆ. ಇದಕ್ಕೆ ಬಿಲ್ಕಿಸ್ ಬಾನು ಪ್ರಕರಣ ನಿದರ್ಶನವಾಗಿದೆ ಎಂದು ತಿಳಿಸಿದರು.