ತುಮಕೂರು ಜಿಲ್ಲೆಯ ಅಹಿಂದ ವರ್ಗಗಳ ಮತದಾರರ ಸಂಖ್ಯೆ ಹೆಚ್ಚಿದ್ದರೂ ರಾಜಕೀಯ ಅಧಿಕಾರ ಪಡೆಯುವಲ್ಲಿ ವಿಫಲರಾಗಿದ್ದೇವೆ. ರಾಜಕೀಯ ಅಧಿಕಾರಕ್ಕಾಗಿ ತಳ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತುಮಕೂರಿನ ಬಾಲಭವನದಲ್ಲಿ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರೆದ ಸಮಾಜಗಳು ಅವರಲ್ಲಿ ಆತಂರಿಕವಾಗಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ರಾಜಕೀಯ ಅಧಿಕಾರ ಸಿಗುವಂತಹ ಸಂದರ್ಭದಲ್ಲಿ ಒಂದಾಗಿ ತಮ್ಮ ಹಕ್ಕು ಪ್ರತಿಪಾದಿಸುತ್ತಾರೆ. ನಾವುಗಳು ಅವರ ರೀತಿಯಲ್ಲಿಯೇ ರಾಜಕೀಯ ಅಧಿಕಾರದ ಅವಕಾಶವಿದ್ದಾಗ ಬಿನ್ನಮತ ಮರೆತು ಒಗ್ಗೂಡಬೇಕಿದೆ ಎಂದರು.
ದೇಶದಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲ ವರ್ಗದ ಜನರಿಗೆ ಅವರ ಯೋಗ್ಯತೆಯ ಆಧಾರದ ಮೇಲೆ ಅಧಿಕಾರ ನೀಡಿರುವ ಪಕ್ಷವೆನ್ನಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ದೇವರಾಜ ಅರಸು, ವೀರಪ್ಪಮೊಯಿಲಿ, ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಅದೇ ಸಮಯದಲ್ಲಿ ಲಿಂಗಾಯಿತರು, ಒಕ್ಕಲಿಗರಿಗೂ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಇದುವರೆಗೂ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ ಎಂದು ಹೇಳಿದರು.
ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಮಾತನಾಡಿ,ಮಲ್ಲಣ್ಣನವರಿಂದ ಇಂದಿನ ಚಂದ್ರಶೇಖರಗೌಡರವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಎಲ್ಲರೂ ರಾಜಕೀಯವಾಗಿ ಬೆಳೆದವರೇ ಆಗಿದ್ದಾರೆ. ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಚಂದ್ರಶೇಖರಗೌಡ ಸಮಾಜ ಕಟ್ಟುವ ಜೊತೆಗೆ ಪಕ್ಷ ಸಂಘಟನೆಯತ್ತಲೂ ತೊಡಗುವ ಅಗತ್ಯವಿದೆ ಎಂದರು.
ದೇವರಾಜ ಅರಸು ನಂತರ ಹೆಚ್ಚು ಬಡವರ ಪರ ಕೆಲಸ ಮಾಡಿದವರು ಸಿದ್ದರಾಮಯ್ಯನವರು. ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದ ಬಿಜೆಪಿಯವರಿಗೆ ಹಿಮಾಚಲಪ್ರದೇಶದ ಫಲಿತಾಂಶ ತಿರುಗೇಟು ನೀಡಿದೆ. ಕರ್ನಾಟಕದಲ್ಲಿಯೂ ಕನಿಷ್ಠ 130 ಸೀಟುಗಳನ್ನು ಗೆಲ್ಲಿಸಿಕೊಳ್ಳಲು ನಾವೆಲ್ಲರೂ ಹೋರಾಡಬೇಕಿದೆ ಎಂದು ತಿಳಿಸಿದರು.